ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಶಿಮಠ ದುರ್ಬಲಗೊಳ್ಳಲು ಜನಸಂಖ್ಯೆ ಏರಿಕೆ,ಮೂಲಸೌಕರ್ಯ ವೃದ್ಧಿ ಕಾರಣ: ಐಯುಸಿಎನ್

Last Updated 11 ಫೆಬ್ರುವರಿ 2023, 11:29 IST
ಅಕ್ಷರ ಗಾತ್ರ

ನವದೆಹಲಿ: ಹಿಮಾಲಯ ಪ್ರದೇಶವು ದುರ್ಬಲಗೊಳ್ಳುತ್ತಿರುವುದು ಹಾಗೂ ಜನಸಂಖ್ಯೆ ಏರಿಕೆ ಮತ್ತು ಮೂಲಸೌಕರ್ಯಗಳ ವೃದ್ಧಿಯು ಜೋಶಿಮಠದಂತ ಪ್ರಕರಣಗಳಿಗೆ ಕಾರಣವಾಗಿದೆ ಎಂದು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ (ಐಯುಸಿಎನ್) ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ಪರಿಸ್ಥಿತಿ ಎದುರಿಸುವಲ್ಲಿ ಭಾರತದ ಸಿದ್ಧತೆ ಮತ್ತು ಪ್ರತಿಕ್ರಿಯೆ ಗಣನೀಯವಾಗಿ ಉತ್ತಮಗೊಂಡಿದೆ ಎಂದು ಐಯುಸಿಎನ್‌ನ ಭಾರತದ ಪ್ರತಿನಿಧಿ ಯಶ್‌ವೀರ್ ಭಟ್ನಾಗರ್‌ ಇಲ್ಲಿ ಹೇಳಿದರು.

ದಿಢೀರ್‌ ಪ್ರವಾಹ, ಮೇಘಸ್ಫೋಟ ಅಥವಾ ಜೋಶಿಮಠದಂತಹ ಪ್ರಕರಣ ಈ ಎಲ್ಲ ಸಂದರ್ಭಗಳಲ್ಲಿ ವಿವಿಧ ಅಂಶಗಳು ಒಟ್ಟಾಗಿ ಕಾರಣವಾಗುತ್ತವೆ. ಜನಸಂಖ್ಯೆಯ ಏರಿಕೆ ಮತ್ತು ಪ್ರವಾಸಿಗರಿಗಾಗಿ ಹೆಚ್ಚುತ್ತಿರುವ ಮೂಲಸೌಕರ್ಯಗಳ ಒತ್ತಡ, ಹಿಮಾಲಯ ಪ್ರದೇಶವು ದುರ್ಬಲಗೊಳ್ಳುತ್ತಿರುವುದು ಮೂಲ ಕಾರಣಗಳು ಎಂದು ಅಭಿಪ್ರಾಯಪಟ್ಟರು.

ಸಂರಕ್ಷಕರಾಗಿ ನಾವು ಯಾವುದೇ ಸ್ಥಳದಲ್ಲಿ ಅಭಿವೃದ್ಧಿ ಸ್ಥಗಿತಗೊಳಿಸಬೇಕು ಎಂದು ಬಯಸುವುದಿಲ್ಲ. ಹಿಮಾಲಯದ ಕುಗ್ರಾಮಗಳಿಗೆ ಮೂಲಸೌಲಭ್ಯಗಳು ಅಗತ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಅಭಿವೃದ್ಧಿ ಆದಷ್ಟು ಸುಸ್ಥಿರವಾಗಿರಬೇಕು ಎಂದು ನಾವು ಬಯಸುತ್ತೇವೆ ಎಂದರು.

ಹಿಮಾಲಯದಲ್ಲಿನ ಜೋಶಿಮಠವು 12 ದಿನಗಳಲ್ಲಿ 5.4 ಸೆಂ.ಮೀನಷ್ಟು ಕುಸಿದಿತ್ತು ಎಂಬುದನ್ನು ಉಪಗ್ರಹ ಚಿತ್ರಗಳು ದೃಢಪಡಿಸಿದ್ದವು. ಜೋಶಿಮಠ ಪಟ್ಟಣವು ಹಿಮಾಲಯದ ಇಳಿಜಾರು ಪ್ರದೇಶದಲ್ಲಿದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿರುವುದು ಇದಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಐಯುಸಿಎನ್ ಇಂಡಿಯಾ ಮತ್ತು ಟಿಸಿಎಸ್‌ ಫೌಂಡೇಷನ್ ಈಗ ಜಂಟಿಯಾಗಿ ‘ಭವಿಷ್ಯಕ್ಕಾಗಿ ಹಿಮಾಲಯ’ ಹೆಸರಿನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುಸ್ಥಿರತೆಗೆ ಒತ್ತು ನೀಡುತ್ತಿದೆ. ಭಾಗಿದಾರರ ಸಹಯೋಗದಲ್ಲಿ ಹಾಲಿ ಕಾರ್ಯಕ್ರಮಗಳ ಮರುಪರಿಶೀಲನೆ, ಸಂಶೋಧನೆ, ಕಟ್ಟಡಗಳ ಸ್ವರೂಪ ಮರುಚಿಂತನೆ ಕ್ರಮಗಳು ಇದರಲ್ಲಿ ಸೇರಿವೆ ಎಂದರು.

ಅರಣ್ಯ ರಕ್ಷಣೆ, ನಗರೀಕರಣ, ಜಲಮೂಲಗಳು, ಇಂಧನ ಸೌಲಭ್ಯ, ಮೂಲಸೌಕರ್ಯ, ವಲಸೆ, ಸ್ಥಳೀಯರ ಸಾಂಪ್ರಾದಾಯಿಕ ತಿಳಿವಳಿಕೆ, ಪ್ರಾಕೃತಿಕ ವಿಕೋಪ ಇತ್ಯಾದಿ ದೃಷ್ಟಿಯಿಂದ ಸಂಶೋಧನೆ ನಡೆದಿದೆ ಎಂದು ಐಯುಸಿಎನ್‌ ಭಾರತ ಕಾರ್ಯಕ್ರಮ ಮೇಲ್ವಿಚಾರಕಿ ಅರ್ಚನಾ ಚಟರ್ಜಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT