ಪುಣೆ: ‘ಅಪಾಯಕಾರಿ ರೋಗಕಾರಕಗಳ ಉದ್ದೇಶಪೂರ್ವಕ ಸಶಸ್ತ್ರೀಕರಣ ಗಂಭೀರವಾಗಿ ಗಮನಿಸಬೇಕಾದ ವಿಷಯ. ಜೈವಿಕ ರಕ್ಷಣೆ, ಜೈವಿಕ ಸುರಕ್ಷತೆ ಮತ್ತು ಜೈವಿಕ ಭದ್ರತೆಯಲ್ಲಿ ರಾಷ್ಟ್ರವನ್ನು ಸಮರ್ಥವಾಗಿ ನಿರ್ಮಿಸುವ ಅಗತ್ಯವನ್ನು ಹೆಚ್ಚಿಸಿದೆ’ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಗುರುವಾರ ಇಲ್ಲಿ ಹೇಳಿದರು.
ಪುಣೆ ಇಂಟರ್ನ್ಯಾಷನಲ್ ಸೆಂಟರ್ ಇಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಭದ್ರತೆ (ಪಿಡಿಎನ್ಎಸ್) 2021ರ ಪುಣೆ ಸಂವಾದದಲ್ಲಿ ‘ವಿಪತ್ತುಗಳು ಮತ್ತು ಸಾಂಕ್ರಾಮಿಕ ಯುಗದಲ್ಲಿ ರಾಷ್ಟ್ರೀಯ ಭದ್ರತಾ ಸನ್ನದ್ಧತೆ’ ಕುರಿತು ಅವರು ಮಾತನಾಡಿದರು.
ಕೋವಿಡ್ –19 ಸಾಂಕ್ರಾಮಿಕ ಮತ್ತು ಹವಾಮಾನ ಬದಲಾವಣೆ ನಿರಂತರ ಎಚ್ಚರಿಕೆಯ ಸಂದೇಶವಾಗಿದೆ. ಎಲ್ಲರ ಯೋಗಕ್ಷೇಮ ಮಾತ್ರ ಎಲ್ಲರ ಉಳಿವನ್ನು ಖಚಿತಪಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಹವಾಮಾನ ಬದಲಾವಣೆಯ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ವಿಪತ್ತುಗಳು ಮತ್ತು ಸಾಂಕ್ರಾಮಿಕ ರೋಗಗಳು ಗಡಿಯಿಲ್ಲದ ಬೆದರಿಕೆಗಳಾಗಿವೆ. ಇವುಗಳನ್ನು ಪ್ರತ್ಯೇಕವಾಗಿ ಎದುರಿಸಲು ಸಾಧ್ಯವಿಲ್ಲ. ನಮ್ಮ ಲಾಭಗಳನ್ನು ಹೆಚ್ಚಿಸಲು ಮತ್ತು ನಷ್ಟವನ್ನು ಕಡಿಮೆ ಮಾಡಲು ತಂತ್ರಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ಸಾಂಕ್ರಾಮಿಕವು ಬೆದರಿಕೆಗಳನ್ನು ಅಂದಾಜಿಸುವ ಅಗತ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಜೈವಿಕ ಸಂಶೋಧನೆಯು ಕಾನೂನುಬದ್ಧ ವೈಜ್ಞಾನಿಕ ಉದ್ದೇಶಗಳನ್ನು ಹೊಂದಿದ್ದರೂ, ಅದರ ದ್ವಿ-ಬಳಕೆಯ ಅಪ್ಲಿಕೇಶನ್ ಅನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ಹವಾಮಾನ ಬದಲಾವಣೆಯೂ ಅನಿರೀಕ್ಷಿತ ಪರಿಣಾಮಗಳನ್ನು ತಂದೊಡ್ಡುವ ಮತ್ತೊಂದು ‘ಬೆದರಿಕೆ’ಯಾಗಿದೆ. ಇದು ಸಂಪನ್ಮೂಲಗಳ ಲಭ್ಯತೆಯ ಮೇಲೆ ಪರಿಣಾಮ ಬೀರುತ್ತದೆ, ಜತೆಗೆ ಸ್ಪರ್ಧೆಗಿಂತ ಸಂಘರ್ಷದ ಮೂಲವೂ ಆಗಬಹುದು ಎಂದರು.
ಹವಾಮಾನ ಬದಲಾವಣೆಯು ಅಸ್ಥಿರತೆಯನ್ನು ವೇಗಗೊಳಿಸುತ್ತದೆ. ಬೃಹತ್ ಜನಸಂಖ್ಯೆಯ ಸ್ಥಳಾಂತರಕ್ಕೂ ಕಾರಣವಾಗಲಿದೆ. 2030ರ ವೇಳೆಗೆ ಭಾರತದಲ್ಲಿ 60 ಕೋಟಿ ಜನರು ನಗರ ಪ್ರದೇಶಗಳಲ್ಲಿ ವಾಸಿಸುವ ನಿರೀಕ್ಷೆಯಿದೆ. ಹವಾಮಾನ ಬದಲಾವಣೆಯಿಂದಾಗಿ ದಕ್ಷಿಣ ಏಷ್ಯಾದ ತಗ್ಗು ಪ್ರದೇಶದ ಕರಾವಳಿ ಪ್ರದೇಶಗಳಿಂದ ವಲಸೆಗಳು ಈಗಾಗಲೇ ಒತ್ತುವರಿಯಾಗಿರುವ ನಗರಗಳಲ್ಲಿ ಮೂಲಸೌಕರ್ಯದ ಕೊರತೆಗಳನ್ನು ಹೆಚ್ಚಿಸಬಹುದು.ಇವೆಲ್ಲವೂ ಆಂತರಿಕ ಭದ್ರತಾ ನಿರ್ವಹಣೆ, ಆರ್ಥಿಕ ಭದ್ರತೆ, ನೀರು ಮತ್ತು ಆಹಾರ ಭದ್ರತೆಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.