ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಚಲ ಮುಖ್ಯಮಂತ್ರಿ ಸುಖ್ವಿಂದರ್‌ ಸುಖ್ಖು: ಚಾಲಕನ ಮಗ ಸಾರಥಿ

ಭಾರಿ ಪೈಪೋಟಿ, ಶಕ್ತಿ ಪ್ರದರ್ಶನದ ಬಳಿಕ ಸರ್ವಾನುಮತದ ನಿರ್ಧಾರ ಕೈಗೊಂಡ ಕಾಂಗ್ರೆಸ್‌: ಇಂದು ಪ್ರಮಾಣವಚನ
Last Updated 10 ಡಿಸೆಂಬರ್ 2022, 20:55 IST
ಅಕ್ಷರ ಗಾತ್ರ

ಶಿಮ್ಲಾ (ಪಿಟಿಐ): ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಹುದ್ದೆಯ ಪೈಪೋಟಿ ಕೊನೆಗೊಂಡಿದೆ. ಹಿಮಾಚಲ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಸುಖ್ವಿಂದರ್ ಸಿಂಗ್ ಸುಖ್ಖು ಅವರು ಹೊಸ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಪಕ್ಷವು ಶನಿವಾರ ಘೋಷಿಸಿದೆ. ಈ ಹಿಂದಿನ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಮುಕೇಶ್‌ ಅಗ್ನಿಹೋತ್ರಿ ಅವರು ಉಪಮುಖ್ಯಮಂತ್ರಿ ಆಗಲಿದ್ದಾರೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯ ಬಳಿಕ ಈ ಹೆಸರುಗಳನ್ನು ಪ್ರಕಟಿಸಲಾಗಿದೆ. ಪ್ರಮಾಣವಚನವು ಭಾನುವಾರ ನಡೆಯಲಿದೆ.

ಶಾಸಕರ ಸಭೆಯನ್ನು ಶುಕ್ರವಾರವೇ ನಡೆಸಲಾಗಿತ್ತು. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಅಧಿಕಾರವನ್ನು ಪಕ್ಷದ ಅಧ್ಯಕ್ಷರಿಗೆ ನೀಡುವ ನಿರ್ಣಯವನ್ನು ಆ ಸಭೆಯಲ್ಲಿ ಸರ್ವಾನು ಮತದಿಂದ ಅಂಗೀಕರಿಸಲಾಗಿತ್ತು.

68 ಸದಸ್ಯ ಬಲದ ವಿಧಾನಸಭೆಯ 40 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡು ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿದೆ. ನವೆಂಬರ್‌ 12ರಂದು ಮತದಾನ ನಡೆದಿತ್ತು. ಫಲಿತಾಂಶವು ಗುರುವಾರ ಪ್ರಕಟವಾಗಿದೆ.

58 ವರ್ಷ ವಯಸ್ಸಿನ ಸುಖ್ಖು ಅವರು ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದವರು. ಜೊತೆಗೆ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸುಖ್ಖು ಅವರು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಆಪ್ತರು ಎಂದೂ ಮೂಲಗಳು ಹೇಳಿವೆ.

ದಿವಂಗತ ವೀರಭದ್ರ ಸಿಂಗ್‌ ಅವರ ಹೆಂಡತಿ, ರಾಜ್ಯ ಘಟಕದ ಅಧ್ಯಕ್ಷೆಯಾಗಿರುವ ಪ್ರತಿಭಾ ಸಿಂಗ್‌, ಮುಕೇಶ್‌ ಅಗ್ನಿಹೋತ್ರಿ ಮತ್ತು ಸುಖ್ಖು ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು. ಈ ನಾಯಕರ ಬೆಂಬಲಿಗರು ಘೋಷಣೆಗಳನ್ನು ಕೂಗಿ ಶಕ್ತಿ ಪ್ರದರ್ಶನ ವನ್ನೂ ನಡೆಸಿದ್ದರು.

ವೀರಭದ್ರ ಸಿಂಗ್‌ ಅವರು ಕಳೆದ ವರ್ಷ ಮೃತಪಟ್ಟರು. ಅಲ್ಲಿಯವರೆಗೆ ಸುಮಾರು ನಾಲ್ಕು ದಶಕಗಳ ಕಾಲ ಹಿಮಾಚಲ ಪ್ರದೇಶ ಕಾಂಗ್ರೆಸ್‌ನ ಮೇಲೆ ಅವರ ಬಿಗಿ ಹಿಡಿತ ಇತ್ತು.

ಚಾಲಕನ ಮಗ ಸಾರಥಿ

ಶಿಮ್ಲಾ (ಪಿಟಿಐ): ಹಿಮಾಚಲ ಪ್ರದೇಶ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸುಖ್ವಿಂದರ್‌ ಸಿಂಗ್ ಸುಖ್ಖು ಅವರು ವಿದ್ಯಾರ್ಥಿ ನಾಯಕರಾಗಿ, ರಾಜ್ಯ ಕಾಂಗ್ರೆಸ್ ಸಾರಥಿಯಾಗಿ ಇದ್ದವರು. ಕಣಿವೆ ರಾಜ್ಯವನ್ನು ಐದು ದಶಕಗಳ ಕಾಲ ಬಿಗಿ ಹಿಡಿತದಲ್ಲಿ ಇಟ್ಟುಕೊಂಡಿದ್ದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ವಿರೋಧಿಯಾಗಿ ಗುರುತಿಸಿಕೊಂಡವರು.

ವೀರಭದ್ರ ಸಿಂಗ್ ಅವರ ನಿಧನದ ಬಳಿಕ, ಅವರ ಅನುಪಸ್ಥಿತಿಯಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಕಾಂಗ್ರೆಸ್, ಸಿಂಗ್ ಅವರ ಪತ್ನಿ ಹಾಗೂ ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥೆಯೂ ಆಗಿರುವ ಪ್ರತಿಭಾ ಸಿಂಗ್ ಅವರ ಒತ್ತಡಕ್ಕೆ ಮಣಿಯದೇ ಸುಖ್ಖು ಅವರಿಗೆ ಮಣೆ ಹಾಕಿದೆ. ಈ ಬೆಳವಣಿಗೆಯು ಪಕ್ಷ ಮತ್ತೊಂದು ಹಂತಕ್ಕೆ ಮುನ್ನಡೆಯಲು ಸಿದ್ಧವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

ರಸ್ತೆ ಸಾರಿಗೆ ನಿಗಮದ ಚಾಲಕನ ಮಗ ಸುಖ್ಖು ಅವರು ತಮ್ಮ ಆರಂಭದ ದಿನಗಳಲ್ಲಿ ಶಿಮ್ಲಾದಲ್ಲಿ ಹಾಲು ಮಾರಾಟ ಮಳಿಗೆ ನಡೆಸುತ್ತಿದ್ದರು. ಎನ್‌ಎಸ್‌ಯುಐ ಅಧ್ಯಕ್ಷರಾಗಿದ್ದ ಅವರು ಕಾನೂನು ಪದವೀಧರರು. ಎರಡು ಬಾರಿ ಶಿಮ್ಲಾ ಪಾಲಿಕೆಯ ಸದಸ್ಯರಾಗಿದ್ದರು. 2003ರಲ್ಲಿ ಮೊದಲ ಬಾರಿಗೆ ನಾದೌನ್ ಕ್ಷೇತ್ರದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. 2012ರಲ್ಲಿ ಒಮ್ಮೆ ಸೋತಿದ್ದ ಅವರು ನಂತರದ ಎರಡು ಚುನಾವಣೆಗಳಲ್ಲಿ ಆರಿಸಿಬಂದರು.

ಹಂತಹಂತವಾಗಿ ಬೆಳೆದ ಅವರು ಪಟ್ಟುಬಿಡದ ಹೋರಾಟಗಾರ. ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಜೊತೆ ಜಟಾಪಟಿ ನಡೆಸುತ್ತಲೇ, 2013ರಿಂದ 2019ರವರೆಗೆ ಆರು ವರ್ಷಗಳ ಕಾಲ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಈ ಬಾರಿ ಬಿಜೆಪಿ ಕೈಯಿಂದ ಅಧಿಕಾರ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ, ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರಿಂದ ಮತ್ತೆ ಪ್ರಬಲ ಸ್ಪರ್ಧೆ ಎದುರಾಯಿತು.

ಪ್ರೇಮ್‌ಕುಮಾರ್ ಧುಮಾಲ್ ಬಳಿಕ ಹಮೀರ್‌ಪುರ ಜಿಲ್ಲೆಯಿಂದ ಉನ್ನತ ಹುದ್ದೆಗೆ ಏರಿದ ಎರಡನೇ ವ್ಯಕ್ತಿಯಾಗಿದ್ದಾರೆ. ಪಕ್ಷದ ಸಂಘಟನೆಯನ್ನು ಬಲಪಡಿಸಿ, ಕಾರ್ಯಕರ್ತರ ಜೊತೆ ಒಳ್ಳೆಯ ಸಂಬಂಧ ಇರಿಸಿಕೊಂಡಿದ್ದರು. ಹೀಗಾಗಿಯೇ ಸಹಜವಾಗಿ ಅವರು ಮುಖ್ಯಮಂತ್ರಿ ಹುದ್ದೆಯ ಪ್ರಬಲ ಸ್ಪರ್ಧಿಯಾಗಿದ್ದರು.

ಕಾಂಗ್ರೆಸ್ ಪಕ್ಷವು ಈ ಬಾರಿ ವಂಶಾಡಳಿತಕ್ಕೆ ಮಣೆ ಹಾಕದೇ 40 ವರ್ಷದ ಸುದೀರ್ಘ ರಾಜಕಾರಣದ ಅನುಭವ ಇರುವ ನಾಯಕನನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಿದೆ. ಹಮೀರ್‌ಪುರ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲುವಲ್ಲಿ ಸುಖ್ಖು ಅವರ ಪ್ರಭಾವ ಕೆಲಸ ಮಾಡಿದೆ. ಮಾಜಿ ಮುಖ್ಯಮಂತ್ರಿ ಪಿ.ಕೆ ಧುಮಾಲ್ ಹಾಗೂ ಅವರ ಮಗ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ತವರು ಜಿಲ್ಲೆಯಲ್ಲಿ ಬಿಜೆಪಿ ಒಂದೂ ಕ್ಷೇತ್ರ ಗೆಲ್ಲದಂತೆ ನೋಡಿಕೊಂಡ ಹೆಗ್ಗಳಿಕೆಯೂ ಇವರದ್ದು.

ಸುಖ್ಖು ಅವರ ಆಯ್ಕೆಯಲ್ಲಿ ಜಾತಿ ಲೆಕ್ಕಾಚಾರವೂ ಕೆಲಸ ಮಾಡಿದೆ. ವೀರಭದ್ರ ಸಿಂಗ್‌ ಅವರು ರಾಜ್ಯದ ಪ್ರಬಲ ಸಮುದಾಯಗಳಲ್ಲೊಂದಾದ ಠಾಕೂರ್ ಸಮುದಾಯದವರು. ಸುಖ್ಖು ಅವರೂ ಇದೇ ಸಮುದಾಯಕ್ಕೆ ಸೇರಿದ ಕಾರಣಕ್ಕೆ ಅವರ ಆಯ್ಕೆ ಸುಲಭವಾಯಿತು. ‘2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನೂ ತೂಗಿಸಿಕೊಂಡು ಹೋಗುವ ಸಾರಥಿ ಸ್ಥಾನಕ್ಕೆ ಸುಖ್ಖು ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ’ ಎಂದು ಹಿಮಾಚಲ ಪ್ರದೇಶ ವಿಶ್ವ
ವಿದ್ಯಾಲಯದ ಪ್ರಾಧ್ಯಾಪಕ ರಾಮೇಶ್ ಸಿ. ಚೌಹಾಣ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT