ಜೈಲಿನಲ್ಲೇ ಬಿ.ಎ ಕೋರ್ಸ್ ಮಾಡಿದ ಗ್ಯಾಂಗ್ಸ್ಟರ್ ಅರುಣ್ ಗಾವ್ಳಿ

ನಾಗ್ಪುರ: ‘ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಗ್ಯಾಂಗ್ಸ್ಟರ್, ರಾಜಕಾರಣಿ ಅರುಣ್ ಗಾವ್ಳಿ, ಮಹಾರಾಷ್ಟ್ರದ ಮುಕ್ತ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆಯಲಿದ್ದಾರೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
‘2017ರಲ್ಲಿ ಎನ್ಜಿಒವೊಂದು ಆಯೋಜಿಸಿದ್ದ ‘ಗಾಂಧಿ ಚಿಂತನೆ’ ಪರೀಕ್ಷೆಯಲ್ಲಿ ಅರುಣ್ ಉನ್ನತ ಶ್ರೇಣಿ ಪಡೆದಿದ್ದರು. 2019ರಲ್ಲಿ ನಾಸಿಕ್ನ ಯಶವಂತರಾವ್ ಚವಾಣ್ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯದಲ್ಲಿ (ವೈಸಿಎಂಒಯು) ಬಿಎ ಪದವಿಗೆ ಸೇರಿದ್ದ ಅವರೀಗ ಪದವೀಧರರಾಗುತ್ತಿದ್ದಾರೆ’ ಎಂದು ಜೈಲಿನ ಅಧೀಕ್ಷಕ ಅನೂಪ್ ಕುಮ್ರೆ ಮಾಹಿತಿ ನೀಡಿದ್ದಾರೆ.
‘ಬಿ.ಎ ಮೊದಲ ಮತ್ತು ಎರಡನೆ ವರ್ಷದಲ್ಲಿ ಒಂದು ವಿಷಯದಲ್ಲಿ ಅರುಣ್ ಅನುತ್ತೀರ್ಣರಾಗಿದ್ದರು. ಆದರೆ, ಅಂತಿಮ ಪದವಿಯಲ್ಲಿ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ದೊರೆಯಿತು. ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯ ಹಾಗೂ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಜೈಲಿನಲ್ಲಿರುವ ಕೈದಿಗಳಿಗೆ ಹಲವು ಕೋರ್ಸ್ಗಳಲ್ಲಿ ಪದವಿ ಪಡೆಯಲು ಅವಕಾಶ ಕಲ್ಪಿಸಿವೆ’ ಎಂದೂ ಅವರು ತಿಳಿಸಿದ್ದಾರೆ.
ಶಿವಸೇನಾದ ಕಾರ್ಪೊರೇಟರ್ ಕಮಲಾಕರ್ ಜಮ್ಸಂದೇಕರ್ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಅರುಣ್ 2008ರಿಂದ ಜೈಲಿನಲ್ಲಿದ್ದಾರೆ.
ಗಾಂಧಿ ಕುರಿತ ಪರೀಕ್ಷೆ: ಕೊಲೆಗಾರ ಟಾಪರ್!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.