ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್, ಕೇಂದ್ರಾಡಳಿತ ಪ್ರದೇಶದ ಎರಡೂ ವಲಯಗಳಲ್ಲಿ ಮಧ್ಯಸ್ಥಿಕೆ ಕೇಂದ್ರಗಳನ್ನು ಸ್ಥಾಪಿಸಲಿದ್ದು, ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಇವುಗಳಿಗೆ ಸಾಂಸ್ಥಿಕ ಸ್ವರೂಪವನ್ನು ನೀಡಲಿದೆ.
ಶ್ರೀನಗರ ಮತ್ತು ಜಮ್ಮುವಿನಲ್ಲಿ ಮಧ್ಯಸ್ಥಿಕೆ ಕೇಂದ್ರ ಸ್ಥಾಪಿಸಲು ಹೈಕೋರ್ಟ್ ಒಪ್ಪಿದೆ ಎಂದು ಹೈಕೋರ್ಟ್ ವಕ್ತಾರರು ತಿಳಿಸಿದ್ದಾರೆ. ಇದನ್ನು ಜಮ್ಮು ಮತ್ತು ಕಾಶ್ಮೀರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಎಂದು ಗುರುತಿಸಲಾಗುತ್ತದೆ.
ಕಕ್ಷಿದಾರರಿಗೆ ನ್ಯಾಯಸಮ್ಮತ, ತ್ವರಿತವಾದ ನ್ಯಾಯದಾನ ಒದಗಿಸುವುದು ಇದರ ಉದ್ದೇಶ. ಸುಲಲಿತ ಮತ್ತು ವ್ಯವಸ್ಥಿತವಾಗಿ ಈ ಕೇಂದ್ರಗಳುಕಾರ್ಯನಿರ್ವಹಿಸಲು ಜಮ್ಮು ಮತ್ತು ಕಾಶ್ಮೀರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (ಅಂತರರಾಷ್ಟ್ರೀಯ ನಿರ್ವಹಣಾ ನಿಯಮಗಳು 2020) ಅನ್ನೂ ರೂಪಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ನಿಯಮಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಉಭಯ ಕೇಂದ್ರಗಳ ಮುಖ್ಯ ಪೋಷಕರಾಗಿರುತ್ತಾರೆ. ಇವುಗಳ ನಿರ್ವಹಣೆಗಾಗಿ ನ್ಯಾಯಾಂಗದ ಪ್ರಮುಖರನ್ನು ಒಳಗೊಂಡ ಸಮಿತಿ ರಚನೆಯಾಗಲಿದೆ.