ನವದೆಹಲಿ: ದೆಹಲಿ ಹೊರಭಾಗದ ಸುಲ್ತಾನ್ಪುರಿಯಲ್ಲಿ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು, ಕಾರಿನಡಿ ಸಿಲುಕಿದ್ದ ಸಂತ್ರಸ್ತೆಯ ಮೃತದೇಹವನ್ನು ಸುಮಾರು 12 ಕಿ.ಮೀ.ವರೆಗೂ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
‘ಆರೋಪಿಯನ್ನು ಆಶುತೋಷ್ ಎಂದು ಗುರುತಿಸಲಾಗಿದೆ. ಈತ ಪೊಲೀಸರಿಗೆ ತಪ್ಪು ಮಾಹಿತಿ ನೀಡುತ್ತಿದ್ದ. ಪ್ರಕರಣದಲ್ಲಿ ಈವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ’ ಎಂದು ವಿಶೇಷ ಪೊಲೀಸ್ ಆಯುಕ್ತ ಸಾಗರ್ ಪ್ರೀತ್ ಹೂಡಾ ಅವರು ತಿಳಿಸಿದ್ದಾರೆ.
ಸ್ನೇಹಿತೆ ಬಂಧಿಸಿಲ್ಲ– ಪೊಲೀಸರಿಂದ ಸ್ಪಷ್ಟನೆ: ಘಟನೆ ಸಂದರ್ಭದಲ್ಲಿ ಸಂತ್ರಸ್ತೆಯ ಜೊತೆಗಿದ್ದ ಸ್ನೇಹಿತೆಯನ್ನು ಬಂಧಿಸಲಾಗಿದೆ ಎಂಬ ವರದಿಗಳನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.
‘ಸ್ನೇಹಿತೆ ನಿಧಿ, ಅಪಘಾತ ನಡೆದ ಕೂಡಲೇ ಭಯಭೀತರಾಗಿ ಸ್ಥಳದಿಂದ ಪರಾರಿಯಾಗಿದ್ದರು. ಪೊಲೀಸರು ಆಕೆಯನ್ನು ಪತ್ತೆ ಮಾಡಿ ಹೇಳಿಕೆ ದಾಖಲಿಸಿಕೊಂಡಿದ್ದರು. ಅವರನ್ನು ಬಂಧಿಸಿಲ್ಲ, ತನಿಖೆಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ’ ಎಂದು ಉಪ ಪೊಲೀಸ್ ಆಯುಕ್ತ ಹರೇಂದ್ರ ಕುಮಾರ್ ಸಿಂಗ್ ತಿಳಿಸಿದರು.