ಬರೇಲಿ: ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ತಲೆತೆಗೆಯುವುದಾಗಿ ಬೆದರಿಕೆ ಒಡ್ಡಿದ ವ್ಯಕ್ತಿಯನ್ನು ಉತ್ತರ ಪ್ರದೇಶದ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಆರೋಪಿಯು ನೂಪುರ್ ಶರ್ಮಾ ಅವರ ತಲೆಯನ್ನು ಕತ್ತರಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿರುವುದು ದಾಖಲಾಗಿದೆ. ವಿಡಿಯೊ ಹಂಚಿಕೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ನಾಸಿರ್ ಹುಸೈನ್ ಫರಿದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಕಸ್ಸಾವನ್ ಪ್ರದೇಶದ ನಿವಾಸಿ.
ಧಾರ್ಮಿಕ ಕಲಹಕ್ಕೆ ಕಾರಣವಾಗುವಂತೆ ಯಾರೇ ಹೇಳಿಕೆ ನೀಡಿದರೂ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರು ಒಂದು ದಿನ ಹಿಂದಷ್ಟೇ ಪೊಲೀಸರಿಗೆ ನಿರ್ದೇಶನ ನೀಡಿದ್ದರು.
ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.
ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿದರೆ ತನ್ನ ಮನೆಯನ್ನು ನೀಡುವುದಾಗಿ ಹೇಳಿ ವಿಡಿಯೊ ಮಾಡಿದ್ದ ಅಜ್ಮೀರ್ನ ದರ್ಗಾವೊಂದರ ಧರ್ಮಗುರು, ಖಾದಿಮ್ ಸಲ್ಮಾನ್ ಚಿಸ್ತಿಯನ್ನು ಬಂಧಿಸಲಾಗಿದೆ.