ನವದೆಹಲಿ (ಪಿಟಿಐ): ಮೊಘಲ್ ಅರಸರಿಂದ ಗಲ್ಲಿಗೇರಿದ 10ನೇ ಸಿಖ್ ಗುರು ಗೋವಿಂದ ಸಿಂಗ್ ಅವರ ನಾಲ್ವರು ಪುತ್ರರ ಸ್ಮರಣಾರ್ಥ ಡಿಸೆಂಬರ್ 26 ಅನ್ನು ಇನ್ನು ಮುಂದೆ ‘ವೀರ ಬಾಲ ದಿವಸ’ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ.
ಸಿಖ್ ಗುರುವಿನ ಜನ್ಮ ದಿನಾಚರಣೆಯ ವೇಳೆ ಭಾನುವಾರ ಪ್ರಧಾನಿ ಅವರು ಈ ಪ್ರಕಟಣೆ ನೀಡಿದ್ದಾರೆ.
‘ಗುರುವಿನ ಮಕ್ಕಳ ತ್ಯಾಗ ಮತ್ತು ಅವರ ಸಾವಿಗೆ ನ್ಯಾಯ ಒದಗಿಸಲು ಅವರಿಗೆ ಸಲ್ಲಿಸುತ್ತಿರುವ ಗೌರವವಾಗಿದೆ.ಸಾಹಿಬ್ಜಾದಾ ಜೋರಾವರ್ ಸಿಂಗ್ ಜಿ ಮತ್ತು ಸಾಹಿಬ್ಜಾದಾ ಫತೇಹ್ ಸಿಂಗ್ ಜಿ ಅವರನ್ನು ಜೀವಂತವಾಗಿ ಹೂತು ಹಾಕಿದ ದಿನವೂ ಇದಾಗಿದೆ’ ಎಂದುಅವರು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಕಳೆದ ವರ್ಷ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳಿಂದ ಪಕ್ಷದ ಮೇಲೆ ತೀವ್ರ ಅಸಮಾಧಾನಗೊಂಡಿದ್ದ ಸಿಖ್ ಸಮುದಾಯವನ್ನು ಓಲೈಸಲು ಬಿಜೆಪಿ ಹಲವು ಪ್ರಯತ್ನ ನಡೆಸುತ್ತಿದೆ, ಇದೂ ಅಂತಹ ಪ್ರಯತ್ನಗಳಲ್ಲಿ ಒಂದು ಎಂದು ವಿಶ್ಲೇಷಿಸಲಾಗಿದೆ.