ಆಗಸ್ಟ್ 15 ರಂದು ವಿಭಿನ್ನವಾಗಿ ಕಾಣಲು ಜನರು ಟ್ರೆಂಡ್ಸ್ ಮೊರೆ ಹೋಗಿದ್ದಾರೆ. ಬಟ್ಟೆಗಳ ಮೇಲೆ ತ್ರಿವರ್ಣದ ಚಿತ್ತಾರ, ತ್ರಿವರ್ಣದ ಬ್ಯಾಂಡ್ಗಳು ಇತ್ಯಾದಿ ಆಯ್ದುಕೊಳ್ಳುತ್ತಿದ್ದಾರೆ.
ಮಾಲ್ಗಳಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದ ಬಲೂನುಗಳನ್ನು ಬಳಸಿ ವಿವಿಧ ಮಳಿಗೆಗಳು ಸಿಂಗಾರಗೊಂಡಿವೆ. ಫ್ರೀಡಂ ಸೇಲ್ ಎಂಬ ಹೆಸರಿನಡಿ 50% ರಷ್ಟು ರಿಯಾಯಿತಿ ಸಹ ನೀಡುತ್ತಿದ್ದಾರೆ.
ಇಡೀ ತಿಂಗಳು ಸಾಲು ಹಬ್ಬಗಳಿರುವುದರಿಂದ ಮಾಲ್ನಲ್ಲಿ ಆಫರ್ಗಳದ್ದೇ ಭರಾಟೆ. ಮನಸೋತ ಜನ ಖರೀದಿಯಲ್ಲಿ ಬ್ಯುಸಿ. ಸ್ವದೇಶಿ ಉಡುಗೆಗಳು, ಉತ್ಪನ್ನಗಳತ್ತ ಜನರನ್ನು ಆಕರ್ಷಿಸಲು ಖಾದಿ ಭಂಡಾರವು 40% ರಿಯಾಯಿತಿ ಘೋಷಿಸಿದೆ. ‘ಖಾದಿಯನ್ನು ನಮ್ಮ ದೇಸಿಯರೇ ಬಳಸದಿದ್ದರೆ ಇನ್ನಾರು ಬಳಸಬೇಕು? ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಜನ ಖಾದಿಯತ್ತ ಗಮನ ಹರಿಸುತ್ತಿಲ್ಲ. ಖಾದಿ ಉತ್ಪನ್ನಗಳನ್ನು ಜನರಿಗೆ ತಲುಪಿಸಲೆಂದೇ ಆಫರ್ಗಳನ್ನು ನೀಡಲಾಗುತ್ತಿದೆ’ ಎನ್ನುತ್ತಾರೆ ಅಂಗಡಿ ಮಾಲೀಕರು.
ಸ್ವಾತಂತ್ರ್ಯೋತ್ಸವದ ದಿನದಂದು ಹಲವೆಡೆ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ರಕ್ತದಾನ ಶಿಬಿರಗಳ ಪೋಸ್ಟರ್ಗಳು ಮಾಲ್ಗಳಲ್ಲಿಅಲ್ಲಲ್ಲಿ ಕಾಣಿಸಿದವು. ಜನರನ್ನು ಓದುವಂತೆ ಪ್ರೇರೇಪಿಸುವಂತಿದ್ದವು.
ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವ ದಿನದಂದು ಹೊಸ ಸಾಹಸವೊಂದಕ್ಕೆ ಕೈ ಹಾಕಿದ್ದಾರೆ. ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಸಪ್ತಗಿರಿ ಕಾಲೇಜಿನ ಮೈದಾನದಲ್ಲಿ ಅಂದಾಜು ಮೂರು ಸಾವಿರ ಚದರ ಅಡಿಯಲ್ಲಿ (80x30) ರಂಗೋಲಿಯಲ್ಲಿ ಬೃಹತ್ ತ್ರಿವರ್ಣ ಧ್ವಜ ಅರಳಿ ನಿಲ್ಲಲಿದೆ. 15ರಂದು ಬೆಳಿಗ್ಗೆ 11.30ರಿಂದ ಕಾಲೇಜಿನ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಜತೆಯಾಗಿ ರಂಗೋಲಿ ಬಿಡಿಸಲಿದ್ದಾರೆ.
ಆಗಸ್ಟ್ 15ರವರೆಗೆ ಮಹಾ ಉಳಿತಾಯ ಮೇಳ ಆಚರಿಸಲಿರುವ ಬಿಗ್ಬಜಾರ್, ಗ್ರಾಹಕರನ್ನು ಸೆಳೆಯುತ್ತಿದೆ. ದಿನಸಿ ಹಾಗೂ ಬಟ್ಟೆಗಳ ಮೇಲೆ ರಿಯಾಯಿತಿ ನೀಡಿದೆ. ಒಂದು ಕೊಂಡರೆ ಎರಡು ಉಚಿತ ಎನ್ನುವ ಆಫರ್ಗಳನ್ನು ಕೆಲವು ವಸ್ತುಗಳ ಮೇಲೆ ಇರಿಸಲಾಗಿದೆ. ₹3,000 ಮತ್ತು ₹ 6,000 ಸಾವಿರ ಬೆಲೆಯಷ್ಟು ಖರೀದಿಸಿದರೆ, ₹ 1200 ಮತ್ತು ₹ 2400 ಕ್ಯಾಶ್ಬ್ಯಾಕ್ ಕೂಡ ನೀಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.