ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತವನ್ನು ಕೇಳಿ ಆನಂದಿಸುವ ಅಪರೂಪದ ಕಾರ್ಯಕ್ರಮವನ್ನು ಸುನಾದ ಆರ್ಟ್ಸ್ ಫೌಂಡೇಷನ್ ಹಾಗೂ ಸಮನ್ವಯ ಕಲಾಕೇಂದ್ರ ಆಯೋಜಿಸಿದೆ. ಜೂನ್ 3ರಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ 12 ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ನಡೆಯಲಿದೆ.
‘ಗುರು–ಶಿಷ್ಯರು ಜೊತೆಯಾಗಿ ಒಂದೇ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನೀಡುವುದು ಈ ಕಾರ್ಯಕ್ರಮದ ವಿಶೇಷ. ಇಂತಹ ಕಾರ್ಯಕ್ರಮ ನಗರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ’ ಎಂದು ಸಮನ್ವಯ ಆರ್ಟ್ಸ್ ಫೌಂಡೇಷನ್ ಕಾರ್ಯದರ್ಶಿ ಜಯಂತಿ ಜಿ. ರವಿ ಹೇಳುತ್ತಾರೆ.
ಪ್ರಸಿದ್ಧ ಕಲಾವಿದರಾದ ತಿರುಮಲೆ ಶ್ರೀನಿವಾಸ್, ನಾಗರಾಜರಾವ್ ಹವಾಲ್ದಾರ್, ಎ.ವಿ.ಆನಂದ್, ಆನೂರು ಅನಂತಕೃಷ್ಣ ಶರ್ಮಾ, ಗೀತಾ ರಮಾನಂದ್, ವಿ.ಗೋಪಾಲ್, ಆನೂರು ದತ್ತಾತ್ರೇಯ ಶರ್ಮ, ಪರಮೇಶ್ವರ ಹೆಗಡೆ, ರವೀಂದ್ರ ಯಾವಗಲ್, ಕೌಶಿಕ್ ಐತಾಳ್, ಎಸ್.ಶಂಕರ್, ಚಾರುಲತಾ ರಾಮಾನುಜಂ ಮೊದಲಾದ ಸಂಗೀತ ಕ್ಷೇತ್ರದ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಮನ್ವಯ ಕಲಾಕೇಂದ್ರ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ತಿರುಮಲೆ ಶ್ರೀನಿವಾಸ್ ಹಾಗೂ ಸುನಾದ ಆರ್ಟ್ಸ್ ಫೌಂಡೇಷನ್ನ ಸ್ಥಾಪಕ ಅಧ್ಯಕ್ಷ ಡಾ.ನಾಗರಾಜರಾವ್ ಹವಾಲ್ದಾರ್ ಅವರ ಕರ್ನಾಟಕ ಹಾಗೂ ಹಿಂದೂಸ್ತಾನಿ ಗಾಯನದ ವಿಶೇಷ ಜುಗಲ್ ಬಂದಿಯೂ ಇದೆ. ಇನ್ನು ಬೆಳಿಗ್ಗೆಯಿಂದ ರಾತ್ರಿ ತನಕ ಯುಗಳ ವೀಣಾ ವಾದನ, ಯುಗಳ ಗಾಯನ, ತಬಲಾ, ಮೃದಂಗ ಲಯವಿನ್ಯಾಸವೂ ಇದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ.
ಕಾರ್ಯಕ್ರಮದ ವಿವರಗಳು
ಶನಿವಾರ ಬೆಳಿಗ್ಗೆ 9ಕ್ಕೆ ಉದ್ಘಾಟನೆ. ಲಯಲಾವಣ್ಯ– ಆನೂರು ಆರ್. ಅನಂತಕೃಷ್ಣ ಶರ್ಮ ಶಿಷ್ಯರಿಂದ. ಬೆಳಿಗ್ಗೆ 9.45ಕ್ಕೆ ಗೀತಾ ರಮಾನಂದ್, ಗೋಪಾಲ್ (ಯುಗಳ ವೀಣಾ ವಾದನ). ಆನೂರು ದತ್ತಾತ್ರೇಯ ಶರ್ಮ–ಮೃದಂಗ, ಆರ್. ಸತ್ಯಕುಮಾರ್–ಘಟ.
ಬೆಳಿಗ್ಗೆ 11ಕ್ಕೆ– ಪರಮೇಶ್ವರ ಹೆಗಡೆ–ಗಾಯನ. ಪಂಚಾಕ್ಷರಿ ಹಿರೇಮಠ್– ಹಾರ್ಮೋನಿಯಂ. ಸಮೀರ್ ಚಟರ್ಜಿ –ತಬಲಾ. ಮಧ್ಯಾಹ್ನ 12ಕ್ಕೆ– ಕೆ.ಎಸ್. ಗಿರಿಧರ್, ಈಶ್ವರ್ ಐಯ್ಯರ್ (ಯುಗಳ ಗಾಯನ). ಜ್ಯೋತ್ಸ್ನಾ ಮಂಜುನಾಥ್ – ಪಿಟೀಲು. ಆನೂರು ವಿನೋದ್ ಶ್ಯಾಮ್–ಮೃದಂಗ. ಸುನಾದ್ ಆನೂರು– ಖಂಜಿರ.
ಮಧ್ಯಾಹ್ನ 1ಕ್ಕೆ– ರವೀಂದ್ರ ಯಾವಗಲ್, ಕಿರಣ್ ಯಾವಗಲ್ – ಲಯವಿನ್ಯಾಸ (ತಬಲಾ). ರಂಜನ್ ಬೇವರ (ಪಿಟೀಲು ಲೆಹರ).
ಮಧ್ಯಾಹ್ನ 2ಕ್ಕೆ–ಎ.ವಿ. ಆನಂದ್, ಡಾ.ವಿ ಕೃಷ್ಣ ಲಯವಿನ್ಯಾಸ (ಮೃದಂಗ). ಮಧ್ಯಾಹ್ನ 2.45ಕ್ಕೆ ಕೌಶಿಕ್ ಐತಾಳ್ –ಗಾಯನ. ಸಮೀರ್ ಹವಾಲ್ದಾರ್– ಹಾರ್ಮೋನಿಯಂ. ಕೇದಾರ್ನಾಥ್ ಹವಾಲ್ದಾರ್– ತಬಲಾ.
ಮಧ್ಯಾಹ್ನ 3.45ಕ್ಕೆ ಸಮೀರ್ ಚಟರ್ಜಿ ತಬಲಾ ಲಯವಿನ್ಯಾಸ. ಕೇದಾರ್ನಾಥ್ ಹವಾಲ್ದಾರ್–ಜಂಬೆ. ಸಂಜೆ 4.15ಕ್ಕೆ– ಎಸ್. ಶಂಕರ್ –ಗಾಯನ. ಚಾರುಲತಾ ರಾಮಾನುಜಂ–ಪಿಟೀಲು. ಎನ್. ವಾಸುದೇವ– ಮೃದಂಗ. ಗೋಪಿ ಶ್ರವಣ್– ಮೋರ್ಚಿಂಗ್.
ಸಂಜೆ 5.15ಕ್ಕೆ– ಬಿ.ಎಸ್.ಮಠ್, ಅಕ್ಕಮಹಾದೇವಿ ಮಠ್ (ಯುಗಳ ಪಿಟೀಲು). ಗುರುಮೂರ್ತಿ ವೈದ್ಯ– ತಬಲಾ. ಸಂಜೆ 6.30ಕ್ಕೆ ವಿಶೇಷ ಜುಗಲ್ಬಂದಿ. ತಿರುಮಲೆ ಶ್ರೀನಿವಾಸ್– ಗಾಯನ (ಕರ್ನಾಟಕ ಶೈಲಿ) ಡಾ. ನಾಗರಾಜರಾವ್ ಹವಾಲ್ದಾರ್– ಗಾಯನ(ಹಿಂದೂಸ್ತಾನಿ ಶೈಲಿ). ಮತ್ತೂರು ಶ್ರೀನಿಧಿ –ಪಿಟೀಲು. ಪಂಚಾಕ್ಷರಯ್ಯ ಹಿರೇಮಠ್– ಹಾರ್ಮೋನಿಯಂ. ಆನೂರು ಅನಂತಕೃಷ್ಣ ಶರ್ಮ–ಮೃದಂಗ. ಸಮೀರ್ ಚಟರ್ಜಿ–ತಬಲಾ.
ಸ್ಥಳ: ಅವರ್ಸ್ಕೂಲ್ ಆವರಣ, ಬನಶಂಕರಿ 2ನೇ ಹಂತ. ಶನಿವಾರ ಬೆಳಿಗ್ಗೆ 9ರಿಂದ ರಾತ್ರಿ 9. ಉಚಿತ ಪ್ರವೇಶ.
*
ವಿನಾಯಕ ತಬಲಾ ಸೋಲೊ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ತಿಂಗಳು ನಡೆಸುವ ಕಿರಿಯರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿನಾಯಕ ಅನಂತ ಹೆಗಡೆ ತಬಲಾ ಸೋಲೊ ನಡೆಸಿಕೊಡಲಿದ್ದಾನೆ.
ಈ ಬಾಲಕ ಈಗಾಗಲೇ ಮೈಸೂರು ದಸರಾ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ವೇದಿಕೆ ಸೇರಿದಂತೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ತಬಲಾ ಸಾಥ್ ನೀಡಿದ ಅನುಭವ ಪಡೆದಿದ್ದಾನೆ. ಇವನ ತಬಲಾ ವಾದನಕ್ಕೆ ಹಾರ್ಮೋನಿಯಂ ಮತ್ತು ಗಾಯನ ಲೆಹರಾವನ್ನು ಹಿಂದೂಸ್ತಾನಿ ಗಾಯಕ ಹೆಗ್ಗಾರ ಅನಂತ ಹೆಗಡೆ ನೀಡಲಿದ್ದು, ತಾಳದಲ್ಲಿ ಗೌರೀಶ ಅನಂತ ಹೆಗಡೆ ಸಹಕರಿಸಲಿದ್ದಾರೆ.
ತಬಲಾ ವಾದನದ ನಂತರ ದಾವಣಗೆರೆಯ ಎಸ್.ಬಿ. ಸ್ಫೂರ್ತಿ ಹಾಗೂ ನಮಿತಾ ಜಿ. ಅವರಿಂದ ಭರತನಾಟ್ಯ ಕಾರ್ಯಕ್ರಮವೂ ಇದೆ.
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಶನಿವಾರ ಜೂನ್ 3ರಂದು ಮಧ್ಯಾಹ್ನ 3.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.