ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲಿ ಮೋಡಗಳೇ...

Last Updated 26 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

`ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ~ ಎನ್ನುವ ಕವಿನುಡಿಯಂತೆ, ಬೆಂಗಳೂರಿನ ಜನರು ಯಾವುದು ಜಾಸ್ತಿ ಆದರೂ ಸಹಿಸರು. ಈಗ ಅವರ ಅಸಹನೆ, ಜ್ವರದಂತೆ ಸುಡುತ್ತಿರುವ ಬಿಸಿಲಿನ ಝಳದ ಕುರಿತಾದುದು. `ಬೇಗ ಇನ್ನೊಂದು ಒಳ್ಳೆಯ ಮಳೆ ಬರಬಾರದೆ~ ಎಂದು ಅವಲತ್ತುಕೊಳ್ಳುತ್ತಿದ್ದಾರೆ.

ಮನೆಯಿಂದ ಹೊರಗೆ ಬರಲೇ ಅನೇಕರಿಗೆ ಮನಸ್ಸಿಲ್ಲ. `ಈ ಬಿಸಿಲಿನಲ್ಲಿ ಹೊರಗೆ ಹೋಗುವವರು ಯಾರಪ್ಪಾ?~ ಎನ್ನುವ ಅಳಲು ಅವರದ್ದು. ಅಂದಹಾಗೆ, ಮೂಲ ಬೆಂಗಳೂರಿಗೆ ಈ ಬಿಸಿಲ ಋತುವಿನ ಹವಾಮಾನ ಬೆರಗು ಮೂಡಿಸಿದೆ. ಹಳೆಯ ತಲೆಮಾರಿನ ಬೆಂಗಳೂರು ಜನರನ್ನು ಮಾತನಾಡಿಸಿದರೆ, ಅವರು ಒಂದು ಕಥೆಯನ್ನೇ ಬಿಚ್ಚಿಡುತ್ತಾರೆ.

ಎಲ್ಲಾ ರಸ್ತೆಗಳಲ್ಲೂ ಸಾಲು ಸಾಲು ಮರಗಳು, ಒಂದೊಂದು ಬಡಾವಣೆಗಳಲ್ಲೂ ಒಂದೊಂದು ತುಂಬಿದ ಕೆರೆಗಳು. ಯಡಿಯೂರು ಕೆರೆ, ಹಲಸೂರು ಕೆರೆ, ಸ್ಯಾಂಕಿಕೆರೆ, ಕೆಂಪಾಂಬುಧಿ ಕೆರೆ, ಸಾರಕ್ಕಿ ಕೆರೆ, ಪುಟ್ಟೇನಹಳ್ಳಿ ಕೆರೆ, ಬೆಳಂದೂರು ಕೆರೆ, ಜರಗನಹಳ್ಳಿ ಕೆರೆ- ಒಂದೇ ಎರಡೇ ಪಟ್ಟಿ ಮಾಡುತ್ತಾ ಹೊರಟರೆ ಹನುಮನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ.

ಮಲ್ಲೇಶ್ವರಂನ ರಸ್ತೆಗಳಲ್ಲಿ ಓಡಾಡುತ್ತಿದ್ದರೆ ಸೂರ್ಯನ ನೆರಳೂ ತಲೆಯ ಮೇಲೆ ಬೀಳುತ್ತಿರಲಿಲ್ಲ. ಮಾರ್ಕೆಟ್ ಬಳಿ ಇರುವ ಕೋಟೆ ಹೈಸ್ಕೂಲ್ ಮುಂಭಾಗದಿಂದ ರಸ್ತೆಯಿಂದ ನೇರವಾಗಿ ನಡೆಯುತ್ತಾ ನೆಟ್ಟಕಲ್ಲಪ್ಪ ವೃತ್ತದ ಕಡೆಗೆ ತಂಪಾದ ನೆರಳಿನಲ್ಲಿ ಆಹ್ಲಾದಕರವಾದ ವಾತಾವರಣದಲ್ಲಿ ನಡೆಯುತ್ತಾ ಹೊರಟರೆ ದಾರಿಯ ಆಯಾಸವೇ ಗೊತ್ತಾಗುತ್ತಿರಲಿಲ್ಲ.

ನಗರದ  ಹಳೆಯ ಬಡಾವಣೆಗಳಾದ ಹಲಸೂರು, ಮಲ್ಲೇಶ್ವರಂ, ಬಸವನಗುಡಿ ಮುಂತಾದ ಕಡೆಗಳಲ್ಲಿ ಮನೆ ಮನೆಯ ಮುಂದೆಯೂ ಮರದ ನೆರಳಿರುತ್ತಿತ್ತು, ಅಕ್ಕಪಕ್ಕದ ಮನೆಯವರೆಲ್ಲ ಬೇಸಿಗೆಯ ಸಂಜೆಯನ್ನು ಮನೆಯ ಹೊರಗಡೆ ಮರದ ಕೆಳಗೆ ಕುಳಿತು ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಪ್ರತಿದಿನ ಒಬ್ಬೊರನ್ನೊಬ್ಬರು ಮಾತನಾಡಿಸುತ್ತಾ ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಿದ್ದುದರಿಂದ ನೆರೆಹೊರೆಯವರಲ್ಲಿ ನಂಬಿಕೆ ಪ್ರೀತಿ ವಿಶ್ವಾಸಗಳಿರುತ್ತಿದ್ದವು...
 
ಹೀಗೆ ಕಳೆದ ದಿನಗಳ ನೆನಪುಗಳನ್ನು ಚಪ್ಪರಿಸುವಾಗ ಮುಖದಲ್ಲಿ ಮಂದಹಾಸ ಮಿಂಚಿ ಮಾಯವಾಗುವುದು. ಮರುಕ್ಷಣವೇ ಈಗಿನ ಬೆಂಗಳೂರಿನ ಚಿತ್ರದ ಬಗ್ಗೆ ಅವರಲ್ಲಿ ಆತಂಕ.
ಇವತ್ತಿನ ನಗರದ ಸ್ಥಿತಿ ನೋಡಿ. ಒಬ್ಬರನ್ನೊಬ್ಬರು ಅರಿಯರು, ನೆರೆಮನೆಯವರೂ ಪರಕೀಯರೇ ಆಗಿರುವರು. ಮುಖ ನೋಡಿದರೆ ನಗಲೂ ಹಿಂದೆಮುಂದೆ ನೋಡುವ ಕಾಲ, ಮರ ಗಿಡಗಳು ಮಾಯವಾಗಿವೆ.

ಅದರ ಜಾಗವನ್ನು ಮೆಟ್ರೊಗಳು, ಅಂಡರ್‌ಪಾಸ್‌ಗಳು ಆಕ್ರಮಿಸಿ ಕೊಂಡಿವೆ. ಕೆರೆಗಳನ್ನು ಬಹುಮಹಡಿಯ ಕಟ್ಟಡಗಳು ನುಂಗಿ ನೀರು ಕುಡಿದಿವೆ. ಪಾರ್ಕ್‌ಗಳಲ್ಲಷ್ಟೇ ಮರಗಿಡಗಳನ್ನು ನೋಡುವ ಕಾಲ ಬೆಂಗಳೂರಿಗರಿಗೆ ಒದಗಿ ಬಂದಿದೆ.

ಎಂಬತ್ತರ ದಶಕದವರೆಗೂ ಅಷ್ಟು ಇಷ್ಟು ನೆಮ್ಮದಿಯಾಗೇ ಇದ್ದ ಬೆಂಗಳೂರು ನಂತರ ಭೂದಾಹಿಗಳ, ವಲಸಿಗರಿಂದಾಗಿ ಹಾಗೂ ನಗರೀಕರಣದ ಭರಾಟೆಯಲ್ಲಿ ತನ್ನತನವನ್ನು ಕಳೆದುಕೊಂಡಿದೆ. ಅಷ್ಟು ಮಾತ್ರವಲ್ಲ, ತನ್ನ ತಂಪು ಹವಾಮಾನವನ್ನು ಕಳೆದುಕೊಂಡಿದೆ. ಏರ್‌ಕಂಡೀಷನ್ ನಗರವೀಗ ಬಿಸಿಲ, ದೂಳಿನ ನಗರ!

ಯುಗಾದಿಗೆ ಒಂದು ಮಳೆ, ಕರಗಕ್ಕೆ ಇನ್ನೊಂದು ಮಳೆ ಎಂಬಂತೆ ಬರುತ್ತಿದ್ದ ಮಳೆ ಈಗ ಲೆಕ್ಕ ತಪ್ಪಿದಂತಿದೆ. ವಾಸಕ್ಕಾಗಿ ನೀರಿನ ಮೂಲವಾದ ಕೆರೆಗಳನ್ನು ನುಂಗಿದ್ದೇವೆ, ನಗರೀಕರಣದ ಹೆಸರಿನಲ್ಲಿ ಮೆಟ್ರೊ, ಅಂಡರ್‌ಪಾಸ್, ರಸ್ತೆ ವಿಸ್ತರಣೆಗಾಗಿ ಮರಗಳನ್ನು ನಾಶಪಡಿಸಿದ್ದೇವೆ. `ಬಾ ಮಳೆಯೇ ಬಾ~ ಎಂದು ಹಾಡಿದರೆ ಮಳೆ ಅಷ್ಟು ಸುಲಭವಾಗಿ ಬರುವುದೇ? ಅದು ನಮ್ಮಿಂದ ಮುನಿಸಿಕೊಂಡು ದೂರವಾಗಿದೆ. ಆದರೂ ನಾವು ಮತ್ತೆ ಮತ್ತೆ ಹಾಡಲೇಬೇಕಿದೆ-

 `ಹುಯ್ಯೋ ಹುಯ್ಯೋ ಮಳೆರಾಯ...~ - 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT