ಸೌತೆಕಾಯಿ, ನವಿಲುಕೋಸು, ಕ್ಯಾರೆಟ್ ಜ್ಯೂಸ್ ಸೇವನೆ ಮಾಡುತ್ತಾ ಶಿವಧ್ಯಾನ ಮಾಡುವುದು ಒಳ್ಳೆಯದು. ಉಪವಾಸ ಇರುವಾಗ ಹಣ್ಣು ಮಾತ್ರ ಸೇವನೆ ಮಾಡಬಹುದು ಎಂದು ಕೆಲವರು ನಂಬಿದ್ದಾರೆ. ಆದರೆ ಹಣ್ಣಿಗಿಂತಲೂ ತರಕಾರಿ ರಸ ಸೇವನೆ ಶ್ರೇಷ್ಠ. ಸೌತೆಕಾಯಿಯನ್ನು ತೆಳುವಾಗಿ ಕತ್ತರಿಸಿ ಒಂದು ಪಾತ್ರೆಗೆ ಅಥವಾ ಜಗ್ಗೆ ಹಾಕಿಟ್ಟು ಅದಕ್ಕೆ ಸಿಪ್ಪೆ ತೆಗೆದ ಏಲಕ್ಕಿಯನ್ನು ಹಾಕಿಡಬೇಕು. ದಾಹ ಅಥವಾ ಹಸಿವು ಎನಿಸಿದಾಗ ಈ ನೀರನ್ನು ರಾಕ್ಸಾಲ್ಟ್/ ಹಿಮಾಲಯನ್ ಸಾಲ್ಟ್ ಬೆರೆಸಿ ಸೇವಿಸಬೇಕು ಎಂಬುದು ಅವರ ಸಲಹೆ.
ಉಪವಾಸದ ವೇಳೆ ಕಾಫಿ ಸೇವನೆ ಬಿಲ್ಕುಲ್ ಬೇಡ ಎನ್ನುತ್ತಾರೆ ಡಾ. ಜ್ಯೋತಿ. ಇದರಿಂದ ಹೊಟ್ಟೆ ಉರಿ, ಗ್ಯಾಸ್ಟ್ರಬಲ್ ಹೆಚ್ಚುತ್ತದೇ ವಿನಾ ಆರೋಗ್ಯಕಾರಿ ಅಲ್ಲ ಎಂಬುದು ಅವರ ವಿವರಣೆ.
ಹಣ್ಣುಗಳ ಪೈಕಿ ಪಪಾಯ (ಪರಂಗಿ) ಹೊರತು ಇತರ ಹಣ್ಣುಗಳ ಸೇವನೆ ಓಕೆ. ಪರಂಗಿಹಣ್ಣು ಹಸಿವನ್ನು ಹೆಚ್ಚಿಸುತ್ತದೆ, ಏನಾದರೂ ತಿನ್ನಬೇಕು ಎಂದು ಪ್ರಚೋದಿಸುತ್ತದೆ ಎಂಬುದು ಇದಕ್ಕೆ ಕಾರಣ.
ಶಿವೋಪಾಸನೆಯಿಂದ ನಮ್ಮಲ್ಲಿನ ತಾಮಸ ಗುಣಕ್ಕೆ (ನೆಗೆಟಿವಿಟಿ) ಕಡಿವಾಣ ಮತ್ತು ಸಾತ್ವಿಕ (ತಾಳ್ಮೆ/ ಪಾಸಿಟಿವಿಟಿ) ಗುಣದ ವೃದ್ಧಿ ಎಂದು ಹಿರಿಯರು ಹೇಳುತ್ತಾರೆ. ಹಸಿವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಹೋದಾಗ ಮನಸ್ಸು ಪ್ರಕ್ಷುಬ್ಧವಾಗಲಾರಂಭಿಸುತ್ತದೆ. ಇದರಿಂದ ಜಾಗರಣೆ ಮತ್ತು ಉಪವಾಸದ ಏಕಾಗ್ರತೆಗೆ ಭಂಗ ಬರುತ್ತದೆ.
ವೈದ್ಯರು ಹೇಳುವ ಪ್ರಕಾರ, ಸೊಗದೆ ಬೇರಿನ ರಸ, ಮಜ್ಜಿಗೆ ಡಯಟ್, ಬೇಲದ ಹಣ್ಣಿನ ರಸದ ಸೇವನೆ ಶಿವೋಪಾಸನೆ ವೇಳೆ ಶ್ರೇಷ್ಠ. ಬೇಸಿಗೆಯ ಬೇಗೆಗೆ ಹೊಟ್ಟೆ ಉರಿ, ಉಬ್ಬರ ಹಾಗೂ ಪಿತ್ಥ ಪ್ರಕೋಪ ಹೆಚ್ಚುವ ಕಾರಣ ಎಳನೀರಿಗೆ ನಿಂಬೆರಸ, ಏಲಕ್ಕಿ ಮತ್ತು ರಾಕ್ಸಾಲ್ಟ್ ಬೆರೆಸಿ ಕುಡಿಯುವುದರಿಂದಲೂ ಹೆಚ್ಚಿನ ಉಪಯೋಗವಿದೆ.
ಕೆಲವರು ಸಾಯಾಂಕಾಲ ಪೂಜೆ ಮುಗಿಸಿ ಪ್ರಸಾದ ತಿಂದು ಗಸಗಸೆ ಪಾಯಸ ಕುಡಿಯುವ ಮೂಲಕ ಉಪವಾಸ ಮುಗಿಸುತ್ತಾರೆ. ಅಲ್ಲದೆ ಸಿಹಿಕುಂಬಳಕಾಯಿ ಪ್ಯಾನ್ ಕೇಕ್ ಮತ್ತು ಸೋರೆಕಾಯಿ ಹಲ್ವಾ ಸೇವಿಸುವುದೂ ಇದೆ. ಒಟ್ಟಿನಲ್ಲಿ, ಅನಾರೋಗ್ಯ ಹಾಗೂ ಉಪವಾಸ ಮಾಡಬಾರದ ಪರಿಸ್ಥಿತಿಯಲ್ಲಿ ದೇಹ ದಂಡನೆಯ ಉಪವಾಸ ಸೂಕ್ತವಲ್ಲ ಎಂಬುದು ವೈದ್ಯರ ಕಾಳಜಿ.
ಕೊಬ್ಬೂ ಕರಗಿಸಿಕೊಳ್ಳಿ
ಶಿವಾರಾಧನೆಯನ್ನು ಆರೋಗ್ಯಕರ ರೀತಿಯಲ್ಲಿ ಮಾಡುವುದೇ ಸೂಕ್ತ. ಜಾಗರಣೆ, ಉಪವಾಸದ ವೇಳೆ ಘನ ಆಹಾರ ಸೇವನೆ, ಧಾನ್ಯಗಳ ಆಹಾರ ಬಹುತೇಕ ನಿಷಿದ್ಧ. ಆದರೆ ದ್ರವಾಹಾರವನ್ನು ಯಾರು ಬೇಕಾದರೂ ಸೇವಿಸಬಹುದು ಎನ್ನುತ್ತಾರೆ ವೈದ್ಯರು.
ಅದರಲ್ಲೂ ಕೊಬ್ಬನ್ನೂ ಕರಗಿಸಿಕೊಂಡು ಉಪವಾಸ ಮಾಡಲು ಬಯಸುವವರು ಹಸಿವು, ನಿಶ್ಶಕ್ತಿ ಅನಿಸಿದಾಗಲೆಲ್ಲ ಮಜ್ಜಿಗೆ ಸೇವಿಸಿದರೆ ಸಾಕು! ಕೊಲೆಸ್ಟರಾಲ್ ಕರಗಿಸುವ ಗುಣ ಮಜ್ಜಿಗೆಗಿದೆ. ಮಜ್ಜಿಗೆ ಡಯಟ್ ಮಾಡಿದ ಮರುದಿನ ದೇಹ ಹಗುರವಾದ ಅನುಭವವಾಗದಿದ್ದರೆ ಕೇಳಿ ಎಂಬುದು ಅವರ ಸವಾಲು!