ಘಟಿಕೋತ್ಸವದ ದಿನವೆಂದರೆ ವಿದ್ಯಾರ್ಥಿಗಳಿಗೆ ಹೊಸ ಬದುಕಿಗೆ ತೆರೆದುಕೊಳ್ಳುವ, ಅವಕಾಶಗಳ ಕದ ತೆರೆಯುವ ಸುಸಮಯ. ಹತ್ತನೇ ತರಗತಿ ಐಸಿಎಸ್ಇ ವಿದ್ಯಾರ್ಥಿಗಳಿಗೂ ಪದವಿಗ್ರಹಣದಂತೆಯೇ ಪ್ರಮಾಣಪತ್ರ ವಿತರಿಸಿದ್ದು ಶ್ರೀವಾಣಿ ವಿದ್ಯಾಸಂಸ್ಥೆ.
ವಿದ್ಯಾದೇವತೆ ಶಾರದೆಯ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಡಾ.ಸಿ.ಬಿ. ಜಗನ್ನಾಥ್ ರಾವ್ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನ ವಿತರಿಸುವ ಕಾರ್ಯಕ್ರಮವೂ ನಡೆಯಿತು. ಈಜು ಸ್ಪರ್ಧೆಯಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ದಿವ್ಯಾ ಗುರುಸ್ವಾಮಿ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿ ಪಡೆದರು. ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ತಮ ಅಂಕ ಪಡೆದಿದ್ದ ಡಿ.ಕೀರ್ತನಾ ಬೆಸ್ಟ್ ಔಟ್ಗೋಯಿಂಗ್ ಪ್ರಶಸ್ತಿ ಗಳಿಸಿದರು.
ಆದಿಶ್ ಪಿ.ಕದಂ ಹಾಗೂ ರಜತಾ ಪಿ. ಶಾಲೆಯಲ್ಲಿ ಕಳೆದ ರಸಾನುಭವಗಳ ಬುತ್ತಿ ಬಿಚ್ಚಿಟ್ಟರೆ ಎಲ್ಲಾ ವಿದ್ಯಾರ್ಥಿಗಳ ನೂರೆಂಟು ನೆನಪುಗಳು ಗರಿಬಿಚ್ಚಿದವು. ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ.ಜಗನ್ನಾಥರಾವ್ ಮಕ್ಕಳ ಮುಖದಲ್ಲಿ ಭಾರತದ ಉಜ್ವಲ ಭವಿಷ್ಯ ಗೋಚರಿಸುತ್ತಿದೆ. ಶಾಲೆಗಳಲ್ಲೇ ಘಟಿಕೋತ್ಸವ ಏರ್ಪಡಿಸುವುದರಿಂದ ಭವಿಷ್ಯದಲ್ಲಿ ಇದು ರ್ಯಾಂಕ್ ಪಡೆಯಲು ಪ್ರೇರೇಪಣೆ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಆರ್.ಎಚ್. ಶಾರದಾಪ್ರಸಾದ್, ಆಶಾ ಶ್ರೀಧರ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.