ಜೀ ಕನ್ನಡ ವಾಹಿನಿಯಲ್ಲಿ ಜೂನ್ 12ರ ಸೋಮವಾರದಿಂದ ಹೊಸ ಎರಡು ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ.
ಸಂಜೆ 6.30ರಿಂದ ‘ಸುಬ್ಬಲಕ್ಷ್ಮಿ ಸಂಸಾರ– ನನ್ನ ಪತಿ ‘ಪರ’ದೈವ’ ಧಾರಾವಾಹಿ ಹಾಗೂ ರಾತ್ರಿ 7ರಿಂದ ‘ಕಿಲಾಡಿ ಕುಟುಂಬ’ ಹಾಸ್ಯ ಸರಣಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿವಾರ ಪ್ರಸಾರವಾಗಲಿದೆ.
ಆರ್.ಆರ್. ಆರ್. ಕ್ರಿಯೇಷನ್ಸ್ ನಿರ್ಮಾಣದ ಈ ಧಾರಾವಾಹಿಯನ್ನು ‘ಹೆಬ್ಬುಲಿ’ ಖ್ಯಾತಿಯ ಕೃಷ್ಣ ಅವರ ಪತ್ನಿ ಸ್ವಪ್ನಕೃಷ್ಣ ನಿರ್ದೇಶಿಸುತ್ತಿದ್ದಾರೆ.
ಹಿರಿಯ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ರಮೇಶ್ ಭಟ್, ಗಿರಿಜಾ ಲೋಕೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ನಟಿ, ಕಂಠದಾನ ಕಲಾವಿದೆ ದೀಪಾ ಭಾಸ್ಕರ್ ಕಥೆಯ ನಾಯಕಿಯಾಗಿದ್ದಾರೆ.
ಕಿರುತೆರೆ ಕಲಾವಿದರಾದ ಭವಾನಿ ಸಿಂಗ್ ಕಥೆಯ ನಾಯಕನಾಗಿ ಹಾಗೂ ‘ಡ್ರಾಮಾ ಜೂನಿಯರ್ಸ್’ ಖ್ಯಾತಿಯ ನಿಹಾಲ್, ಅಪೂರ್ವ ಸೇರಿದಂತೆ ಹಲವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ಜೀ ವಾಹಿನಿ ಬ್ಯುಸಿನೆಸ್ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಗ್ಧೆಯಾಗಿ ಮನೆ, ಗಂಡ, ಮಗು ಎಂದು ಸದಾ ಹಸನ್ಮುಖಿಯಾಗಿ ತನ್ನ ಸಂಸಾರವನ್ನು ಪ್ರೀತಿ ಅಲೆಯಲ್ಲಿ ತೇಲಿಸಲು ಪ್ರಯತ್ನಿಸುವ ‘ಸುಬ್ಬಲಕ್ಷ್ಮಿ ಸಂಸಾರದ’ ಕಥೆ ವೀಕ್ಷಕರ ಮನ ಗೆಲ್ಲುತ್ತದೆ ಎನ್ನುತ್ತಾರೆ ಅವರು.
***
‘ಕಿಲಾಡಿ ಕುಟುಂಬ’
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7ರಿಂದ ಪ್ರಸಾರವಾಗುವ ಹಾಸ್ಯ ಸರಣಿ ‘ಕಿಲಾಡಿ ಕುಟುಂಬ’ ಅಪರೂಪದ ಪ್ರಯತ್ನ ಎಂದು ವಾಹಿನಿ ಹೇಳಿದೆ. ಈಗಾಗಲೇ ಅಪಾರ ಜನಮನ್ನಣೆ ಗಳಿಸಿರುವ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ ಮತ್ತು ಶಿವರಾಜ್ ಕೆ.ಆರ್. ಪೇಟೆ ಹಾಗೂ ಅಂತಿಮ ಹಂತ ತಲುಪಿದ್ದ ಹತ್ತು ಮಂದಿ ಈ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
‘ಕಿಲಾಡಿ ಕುಟುಂಬ’ವನ್ನು ‘ನವರಸನಾಯಕ’ ಜಗ್ಗೇಶ್ ನಿರೂಪಣೆಯೊಂದಿಗೆ ನಡೆಸಿಕೊಡಲಿದ್ದಾರೆ. ಕಿರುತೆರೆಯ ಮಟ್ಟಿಗೆ ಇದು ವಿನೂತನ ಪ್ರಯತ್ನ. ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ‘ಕಿಲಾಡಿ ಕುಟುಂಬ’ದಲ್ಲಿ ಕನ್ನಡದ ಹೊಸ ಸಿನಿಮಾಗಳ ಪ್ರಚಾರಕ್ಕೂ ವೇದಿಕೆಯನ್ನು ಕಲ್ಪಿಸಿಕೊಡಲಾಗುವುದು. ವಿಶಿಷ್ಟ ಸಾಧನೆ ಮಾಡಿದವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗುವುದು ಎಂದು ವಾಹಿನಿ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.