‘ಬಾಲಿವುಡ್ನಿಂದ ಹಾಲಿವುಡ್ಗೆ ಹಾರುತ್ತಿರುವ ತಾರೆಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಆದರೆ ನಾನು ಬಾಲಿವುಡ್ನಲ್ಲಿ ಸರಿಯಾಗಿ ನೆಲೆಯೂರಿದ ನಂತರ ಹಾಲಿವುಡ್ ಬಗ್ಗೆ ಯೋಚಿಸುವೆ’ ಎಂದಿದ್ದಾರೆ ನಟ ಅರ್ಜುನ್ ಕಪೂರ್.
‘ನಾನು ಬೇರೆಯವರ ಕುರಿತು ಮಾತನಾಡುವುದಿಲ್ಲ. ಸದ್ಯಕ್ಕೆ ನಾನು ನನ್ನದೇ ಆದ ಪ್ರೇಕ್ಷಕ ಬಳಗವನ್ನು ಕಟ್ಟಿಕೊಳ್ಳುವ ಪ್ರಯತ್ನನಲ್ಲಿದ್ದೇನೆ. ನಟನಾಗಿ ಬೇರೆ ಕಡೆ ಹೋಗುವ ಮುನ್ನ ಇರುವ ಸ್ಥಳದಲ್ಲಿ ಸುರಕ್ಷಿತವಾಗಿರಬೇಕು. ಜೊತೆಗೆ ಬಾಲಿವುಡ್ನಲ್ಲಿ ಸಾಧಿಬೇಕಾದದ್ದು ಬಹಳಷ್ಟಿದೆ’ ಎಂದು ವಿವರಿಸಿದ್ದಾರೆ ಅರ್ಜುನ್.
‘ಹಾಲಿವುಡ್ಗೆ ಹೋಗುವುದು ಅವರವರ ವೈಯಕ್ತಿಕ ನಿರ್ಧಾರ. ಯಾರಿಗೆ ಯಾವುದರಲ್ಲಿ ಖುಷಿ ಸಿಗುತ್ತದೆಯೋ ಅದನ್ನು ಮಾಡುತ್ತಾರೆ. ಕೆಲವರಿಗೆ ದೇಶದಲ್ಲೇ ಇರುವುದರಿಂದ ಖುಷಿ ಸಿಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ ಅರ್ಜುನ್.
‘ಬೇರೆ ಕಡೆ ಹೋಗಿ ಅಭಿನಯಿಸಲು ಆಸಕ್ತಿ ಇರಬೇಕು. ಈ ವಿಷಯದಲ್ಲಿ ಆಸಕ್ತಿ ಇದೆಯೋ ಅಥವಾ ಇಲ್ಲವೋ ಎಂದು ನನಗೇ ತಿಳಿದಿಲ್ಲ. ಈ ಬಗ್ಗೆ ನಾನು ಯೋಚನೆಯೂ ಮಾಡಿಲ್ಲ. ಬಿ–ಟೌನ್ಗೆ ನಾನಿನ್ನೂ ಹೊಸಬ. ಇಲ್ಲಿ ಕಲಿಯಬೇಕಾದದ್ದು ಬಹಳಷ್ಟಿದೆ. ಆದರೆ ನಟಿ ದೀಪಿಕಾ ಹಾಗೂ ಪ್ರಿಯಾಂಕ ಬಾಲಿವುಡ್ನಲ್ಲಿ ಸಾಕಷ್ಟು ಸಾಧನೆ ಮಾಡಿದ ನಂತರ ಹಾಲಿವುಡ್ಗೆ ಕಾಲಿಟ್ಟರು’ ಎಂದು ಹೇಳಿದ್ದಾರೆ ಅವರು.
ನಟಿ ಪ್ರಿಯಾಂಕಾ, ದೀಪಿಕಾ ಪಡುಕೋಣೆ, ನಿಮ್ರತ್ ಕೌರ್ ಸೇರಿದಂತೆ ಕೆಲವರು ಈಗಾಗಲೇ ಹಾಲಿವುಡ್ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಬಿ–ಟೌನ್ ಅನ್ನು ಆಳುತ್ತಿರುವ ಖಾನ್ಗಳು ಹಾಗೂ ಯುವ ನಾಯಕರು ಹಾಲಿವುಡ್ಗೆ ಪ್ರವೇಶ ಪಡೆಯುವ ಬಗ್ಗೆ ಇನ್ನೂ ಮನಸ್ಸು ಮಾಡಿಲ್ಲ.