ಲಖನೌ: ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಮಾಜಿ ಕಾರು ಚಾಲಕ ಕರ್ನಲ್ನಿಜಾಮುದ್ದೀನ್ (117) ಉತ್ತರಪ್ರದೇಶದ ಅಜಂಗಡ ಜಿಲ್ಲೆಯ ಧಾಕ್ವಾದಲ್ಲಿ ಸೋಮವಾರ ಕೊನೆಯುಸಿರೆಳೆದರು. ಇವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
ಸೋಮವಾರ ಬೆಳಿಗ್ಗೆ ನಿಜಾಮುದ್ದೀನ್ ಸಾವನ್ನಪ್ಪಿದರು ಎಂದು ಅವರ ಪುತ್ರ ಅಕ್ರಂ ತಿಳಿಸಿದರು.
ಪಾಸ್ಪೋರ್ಟ್ ದಾಖಲೆಗಳ ಪ್ರಕಾರ, ನಿಜಾಮುದ್ದೀನ್ ಜನವರಿ 11900ರಲ್ಲಿ ಜನಿಸಿದ್ದರು. ಕಳೆದ ವರ್ಷ 113 ವರ್ಷದ ಪತ್ನಿ ಅಜ್ಬಿನ್ನೀಸಾ ಜತೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆರೆದಿದ್ದರು. ಆ ಮೂಲಕ ದೇಶದಲ್ಲಿ ಬ್ಯಾಂಕ್ ಖಾತೆ ಹೊಂದಿದ ‘ಅತ್ಯಂತ ಹಿರಿಯ ನಾಗರಿಕರು’ ಎಂಬ ಹಿರಿಮೆಗೂ ಪಾತ್ರರಾಗಿದ್ದರು.
ನೇತಾಜಿ, ಮ್ಯಾನ್ಮಾರ್ನಲ್ಲಿದ್ದ ವೇಳೆ ನಿಜಾಮುದ್ದೀನ್ ಚಾಲಕರಾಗಿ ಕೆಲಸ ಮಾಡಿದ್ದರು. 1947ರ ಆಗಸ್ಟ್ 22ರಂದು ಚಿತ್ತಗಾಂಗ್ ನದಿ ತಟದಲ್ಲಿ ಬೋಸ್ ಅವರನ್ನು ಕೊನೇ ಬಾರಿಗೆ ನೋಡಿರುವುದಾಗಿ ತಿಳಿಸಿದ್ದರು.
23 ನೇ ವಯಸ್ಸಿಗೆ ಸಿಂಗಪುರಕ್ಕೆ ತೆರಳಿದ್ದ ನಿಜಾಮುದ್ದೀನ್ ಅಲ್ಲಿ ತಂದೆ ನಡೆಸುತ್ತಿದ್ದ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದರು. 1943ರಲ್ಲಿ ನೇತಾಜಿ ಸಂಪರ್ಕಕ್ಕೆ ಬಂದು ಅವರ ಕಾರು ಚಾಲಕ ಭದ್ರತಾ ಸಿಬ್ಬಂದಿಯ ಹೊಣೆ ಹೊತ್ತಿದ್ದರು.