ಕಾಶ್ಮೀರ ‘ಕಾಯಿಲೆ’ಗೆ ಮೋದಿ ‘ಮದ್ದು’

ಜಮ್ಮು: ಸ್ಪಷ್ಟ ಜನಾದೇಶ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಕಾಶ್ಮೀರ ವಿವಾದ ಬಗೆಹರಿಸಲು ಸಾಧ್ಯ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶನಿವಾರ ಹೇಳಿದರು.
ಕಾಶ್ಮೀರ ಕಣಿವೆಯನ್ನು ಈ ಬಿಕ್ಕಟ್ಟಿನಿಂದ ಪಾರು ಮಾಡುವಂತೆಯೂ ಅವರು ಪ್ರಧಾನಿಗೆ ಮನವಿ ಮಾಡಿದರು. ತಮ್ಮ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಸರ್ಕಾರ ಮತ್ತು ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ರೂಪಿಸಿದ್ದ ನೀತಿಗಳನ್ನು ಮುಂದುವರೆಸಲು ಯುಪಿಎ ಸರ್ಕಾರ ವಿಫಲವಾಗಿದ್ದರಿಂದ ಕಣಿವೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೇಲ್ಸೇತುವೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ದೂರಿದರು.
ಮೋದಿಗೆ ಶ್ಲಾಘನೆ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಅವರು, ‘ಮೋದಿ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳನ್ನು ಇಡೀ ದೇಶ ಬೆಂಬಲಿಸುತ್ತದೆ’ ಎಂದು ಮೆಹಬೂಬಾ ಹೇಳಿದರು.
2015ರ ಡಿಸೆಂಬರ್ನಲ್ಲಿ ಮೋದಿ ದಿಢೀರ್ ಆಗಿ ಲಾಹೋರ್ಗೆ ಭೇಟಿ ನೀಡಿದ್ದನ್ನು ಪ್ರಸ್ತಾಪಿಸಿದ ಅವರು, ‘ಅವರು ಅಂದು ಅಲ್ಲಿನ ಪ್ರಧಾನಿಯನ್ನು ಭೇಟಿ ಮಾಡಿದ್ದರು. ಅದು ದೌರ್ಬಲ್ಯ ಅಲ್ಲ; ಬಲ ಮತ್ತು ಅಧಿಕಾರದ ಸಂಕೇತ’ ಎಂದು ವಿವರಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮೆಹಬೂಬಾ ಟೀಕಿಸಿದರು.
*
ಒಂದು ವೇಳೆ, ಕಾಶ್ಮೀರ ವಿವಾದಕ್ಕೆ ಯಾರಾದರೂ ಪರಿಹಾರ ಹುಡುಕುತ್ತಾರೆ ಎಂದರೆ ಅದುನರೇಂದ್ರ ಮೋದಿ ಮಾತ್ರ.
ಮೆಹಬೂಬಾ ಮುಫ್ತಿ
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.