ಮೈಸೂರು: ಬಲಿಜ ಜನಾಂಗಕ್ಕೆ ಸೂಕ್ತ ಮೀಸಲಾತಿ ನೀಡಬೇಕು ಎಂದು ಉದ್ಯಮಿ ಟಪಾಲ್ ಗಣೇಶ್ ಒತ್ತಾಯಿಸಿದರು.
ಜಿಲ್ಲಾ ಬಲಿಜ ಸಮಾಜವು ಇಲ್ಲಿನ ಪುರಭವನದಲ್ಲಿ ಭಾನುವಾರ ಏರ್ಪಡಿ ಸಿದ್ದ ‘ಬಲಿಜ ಜನಗಣತಿ– 2017’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದಕ್ಕೆ ಸರ್ಕಾರವೇ ಮಾಡಿರುವ ಜಾತಿಗಣತಿಯನ್ನೇ ಆಧಾರವಾಗಿಟ್ಟು ಕೊಂಡರೂ ಸರಿ. ಆದರೆ, ಮೀಸಲಾತಿ ಯನ್ನು ಸಮಾಜಕ್ಕೆ ನೀಡಲೇಬೇಕು ಎಂದು ಆಗ್ರಹಿಸಿದರು.
ಬಲಿಜ ಜನಾಂಗ ಬಲಿಷ್ಠ ಸಮಾಜ ವಾಗಬೇಕು: ಕೊಡಗು ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಮಾತನಾಡಿ, ‘ಬಲಿಜ ಜನಾಂಗ ಬಲಿಷ್ಠ ಸಮಾಜವಾಗಬೇಕು’ ಎಂದರು.
ಬಲಿಷ್ಠ ಜನಾಂಗವಾಗುವುದಕ್ಕೆ ಇರುವ ತೊಡಕು ಎಂದರೆ ಒಗ್ಗಟ್ಟಿನ ಕೊರತೆ. ಇದು ಬಲಿಜ ಸಮಾಜದಲ್ಲಿ ಹಾಸು ಹೊಕ್ಕಾಗಿದೆ. ಒಳಜಗಳಗಳು ಸಾಕಷ್ಟಿವೆ. ಇದೆಲ್ಲ ಹೋಗಿ ಎಲ್ಲರೂ ಒಂದುಗೂಡಿದರೆ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ ಎಂದರು.
ಒಬ್ಬರು ಸಮಾವೇಶ ಏರ್ಪಡಿಸು ತ್ತಿದ್ದರೆ, ಅದೇ ದಿನ ಮತ್ತೊಂದು ಕಡೆ ಸಮಾವೇಶ ಏರ್ಪಡಿಸಿ ದಿಕ್ಕು ತಪ್ಪಿಸುವ ಕೆಲಸ ಮಾತ್ರ ಜನಾಂಗದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. ಇದರಿಂದ ಸಮಾಜದಲ್ಲಿ ಯಾವುದೇ ಪ್ರಗತಿಪರ ಕೆಲಸಗಳು ನಡೆಯದಂತಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಬಲಿಜ ಸಮಾಜದವರು ಸಂಖ್ಯೆಯಲ್ಲಿ ಎಷ್ಟಿದ್ದಾರೆ ಎಂಬುದು ಮುಖ್ಯವಾದ ವಿಚಾರ. ಇದಕ್ಕೆ ಸರ್ಕಾರದ ಜಾತಿಗಣತಿ ಯನ್ನು ನೆಚ್ಚಿಕೊಂಡರೆ ಆಗುವುದಿಲ್ಲ. ಬದಲಿಗೆ, ನಾವೇ ಮನೆಮನೆಗೆ ಹೋಗಿ ಗಣತಿ ಕಾರ್ಯ ಮಾಡಬೇಕು. ಆಗ ಜನಾಂಗದ ಜನಸಂಖ್ಯೆ ಕುರಿತು ಸ್ಪಷ್ಟಚಿತ್ರಣ ಸಿಗುತ್ತದೆ. ಇದರ ಆಧಾರದ ಮೇಲೆ ನಾವು ಮೀಸಲಾತಿಗೆ ಆಗ್ರಹಿಸಬಹುದು’ ಎಂದು ಹೇಳಿದರು.
ಮೈಸೂರಿನಲ್ಲಿ ವಾರ್ಡ್ಗಳಿಗೆ ಗಣತಿ ಕಾರ್ಯಕ್ಕೆ ಹೋದಾಗ ಬಲಿಜ ಸಮಾಜ ದವರು ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಶಾಮಿಯಾನ ಹಾಕಿಸಿ ಎಲ್ಲರನ್ನೂ ಒಂದೆಡೆ ಸೇರಿಸಿ, ಗಣತಿ ಕಾರ್ಯಕ್ಕೆ ಸಹಕಾರ ನೀಡಬೇಕು. ಗಣತಿ ಕಾರ್ಯ ಯಾರೊಬ್ಬರ ಕೆಲಸ ಅಲ್ಲ. ಅದು ಎಲ್ಲರ ಕೆಲಸ. ಇದರ ಲಾಭ ಎಲ್ಲರಿಗೂ ದಕ್ಕಲಿದೆ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಸಾಹಿತಿ ಗುಬ್ಬಿಗೂಡು ರಮೇಶ್, ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ನಾಯ್ಡು, ಯೋಗಿ ನಾರಾ ಯಣ ಬಣಜಿಗ ಸಂಘದ ಅಧ್ಯಕ್ಷ ಎಂ. ನಾರಾಯಣ, ಬೆಮಲ್ ಬಲಿಜ ಸಂಘದ ಅಧ್ಯಕ್ಷ ಎಂ.ಎನ್.ಆನಂದ್, ಉದ್ಯಮಿ ಜೆ.ವಿಜಯಸೂರ್ಯ ನಾಯ್ಡು, ಕೊಡಗು ಜಿಲ್ಲಾ ಬಲಿಜ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷೆ ಶ್ವೇತಾ ಎನ್.ನಾಯ್ಡು, ಸರ್ವ ಬಣಜಿಗ ಸಂಘದ ಉಪಾಧ್ಯಕ್ಷ ಕೆ.ನಾಗಾನಂದ ಹಾಗೂ ಜಿ.ಎನ್. ರಾಜಶೇಖರ ನಾಯ್ಡು ಭಾಗವಹಿಸಿದ್ದರು.
****
ಬಿಜೆಪಿ ಬಲಿಜ ಸಮಾಜ ನಿರ್ಮಾಣಕ್ಕೆ ಹುನ್ನಾರ– ಆರೋಪ
ಸಂಸದ ಪಿ.ಸಿ.ಮೋಹನ್ ಅವರು ಬಳ್ಳಾರಿಯಲ್ಲಿ ಬಲಿಜ ಜನಾಂಗವನ್ನು ಬಿಜೆಪಿ ಬಲಿಜ ಸಮಾಜವನ್ನಾಗಿಸಲು ಹೊರಟಿದ್ದಾರೆ. ಬಿಜೆಪಿಯಲ್ಲಿಲ್ಲದ ಅನ್ಯಪಕ್ಷದವರಿಗೆ ಸಮಾಜದ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿಲ್ಲ ಎಂದು ಉದ್ಯಮಿ ಟಪಾಲ್ ಗಣೇಶ್ ಆರೋಪಿಸಿದರು.