ತಿರುವನಂತಪುರ: ‘ಕೇಂದ್ರದ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಆದೇಶದ ಮೂಲಕ ಆರ್ಎಸ್ಎಸ್ ಅಜೆಂಡಾಗಳನ್ನು ಜಾರಿಗೊಳಿಸುತ್ತಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಬಿಜೆಪಿ ಸರ್ಕಾರ ಈಗ ಗೋಹತ್ಯೆ ನಿಷೇಧಿಸಿದೆ. ಮುಂದೆ ಈ ಸರ್ಕಾರ ಮೀನು ತಿನ್ನುವುದನ್ನೂ ನಿಷೇಧಿಸಬಹುದು. ಹೀಗಾಗಿ ಈ ನಿಷೇಧ ಆದೇಶದ ವಿರುದ್ಧ ಜನ ದನಿ ಎತ್ತಬೇಕು’ ಎಂದಿದ್ದಾರೆ.
‘ಭಾರತ ಹಲವು ಧರ್ಮ, ಹಲವು ಸಂಸ್ಕೃತಿಗಳ ರಾಷ್ಟ್ರ. ಬಹುತ್ವವೇ ಭಾರತದ ಜೀವಾಳ. ಕೇಂದ್ರ ಸರ್ಕಾರ ಈ ಬಹುತ್ವವನ್ನು ಒಡೆಯುವಂಥ ಆದೇಶವನ್ನು ಇಂದು ಹೊರಡಿಸಿದೆ’ ಎಂದು ಅವರು ಹೇಳಿದ್ದಾರೆ.
‘ಗೋ ರಕ್ಷಣೆ ಹೆಸರಿನಲ್ಲಿ ಸಂಘ ಪರಿವಾರ ಈವರೆಗೆ ದೇಶದಾದ್ಯಂತ ಹಿಂಸಾಚಾರಗಳನ್ನು ನಡೆಸುತ್ತಾ ಬಂದಿದೆ. ಈಗ ಹೊಸ ಆದೇಶವು ಎಲ್ಲಾ ಜಾನುವಾರುಗಳನ್ನು ಕೊಲ್ಲುವುದರ ಮೇಲೆ ನಿಷೇಧ ಹೇರಿದೆ’ ಎಂದಿದ್ದಾರೆ.