ನವದೆಹಲಿ: ಕಾಂಗ್ರೆಸ್ ಪಕ್ಷದ ಸಂಶೋಧನಾ ವಿಭಾಗದ ಅಧ್ಯಕ್ಷರನ್ನಾಗಿ ರಾಜ್ಯಸಭೆ ಸದಸ್ಯ, ಕನ್ನಡಿಗ ಪ್ರೊ. ರಾಜೀವ್ ಗೌಡ ಅವರನ್ನು ನೇಮಕ ಮಾಡಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಆದೇಶ ಹೊರಡಿಸಿದ್ದಾರೆ.
ಇದುವರೆಗೆ ಅಸ್ತಿತ್ವದಲ್ಲಿದ್ದ ಸಂಶೋಧನೆ ಮತ್ತು ಉಲ್ಲೇಖ ವಿಭಾಗ, ಸಂಶೋಧನೆ ಮತ್ತು ಸಂಯೋಜನೆ ವಿಭಾಗ ಹಾಗೂ ನೀತಿ, ಯೋಜನೆ ಮತ್ತು ಸಂಯೋಜನೆ ವಿಭಾಗಗಳನ್ನು ವಿಲೀನಗೊಳಿಸಿ ಸಂಶೋಧನಾ ವಿಭಾಗ ರಚಿಸಲಾಗಿದೆ.
ಹೊಸದಾಗಿ ರಚಿಸಲಾಗಿರುವ ಪಕ್ಷದ ಸಾಗರೋತ್ತರ ವಿಭಾಗದ ಮುಖ್ಯಸ್ಥರನ್ನಾಗಿ ಮಾಹಿತಿ ತಂತ್ರಜ್ಞಾನದ ದಿಗ್ಗಜ ಸ್ಯಾಂ ಪಿತ್ರೋಡಾ ಅವರನ್ನು ನೇಮಿಸಲಾಗಿದೆ.
ಪರಿಶಿಷ್ಟ ಪಂಗಡಗಳ ವಿಭಾಗವನ್ನು ಆದಿವಾಸಿ ಕಾಂಗ್ರೆಸ್ ಎಂದು ಮರು ನಾಮಕರಣ ಮಾಡ ಲಾಗಿದ್ದು, ಕೇಂದ್ರದ ಮಾಜಿ ಸಚಿವ ವಿ.ಕಿಶೋರ್ ಚಂದ್ರ ದೇವ್ ಅವರನ್ನು ಮುಖ್ಯಸ್ಥರನ್ನಾಗಿ ನಿಯೋಜಿಸಲಾಗಿದೆ.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮೀನುಗಾರರ ವಿಭಾಗದ ಹೊಣೆಯನ್ನು ಟಿ.ಎನ್. ಪ್ರತಾಪನ್ ಅವರಿಗೆ ವಹಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.