ಹುಬ್ಬಳ್ಳಿ: ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟದಲ್ಲಿ ಸೂಕ್ತ ಮಾರ್ಗದರ್ಶನ ನೀಡಲು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ಯಾವತ್ತಿಗೂ ಮಾದರಿ.
ಜ್ಞಾನ ದೇಗುಲ ಹೆಸರಿನಡಿ ನಡೆಯುವ ‘ಎಜುವರ್ಸ್’ ಮೇಳದಲ್ಲಿ ವೃತ್ತಿಪರ ಕೋರ್ಸ್ ಸೇರ ಬಯಸುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯಕ್ರಮವನ್ನು ಎಂಟು ವರ್ಷಗಳಿಂದ ಆಯೋಜಿಸಿಕೊಂಡು ಬರಲಾಗಿದೆ. ಈ ವರ್ಷ ಕೂಡ ಇದೇ 3 ಮತ್ತು 4ರಂದು ಹುಬ್ಬಳ್ಳಿಯ ಗೋಕುಲ ಗಾರ್ಡನ್ನಲ್ಲಿ ‘ಜ್ಞಾನ ದೇಗುಲ’ ಶೈಕ್ಷಣಿಕ ಮೇಳ ಹಮ್ಮಿಕೊಳ್ಳಲಾಗಿದೆ.
ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಮೆಟೀರಿಯಲ್ ಸೈನ್ಸ್ (ಐ.ಸಿ.ಎಂ.ಎಸ್) ಪ್ರಾಧ್ಯಾಪಕ ಶಿವಪ್ರಸಾದ್ ಪ್ರಧಾನ ಭಾಷಣ ಮಾಡಲಿದ್ದಾರೆ. ಭೋಜನ ವಿರಾಮದ ನಂತರ ನೀಟ್ ಮತ್ತು ಜೆ.ಇ.ಇ ಕುರಿತು ಸಂವಾದ ಇರುತ್ತದೆ. ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದು, ಅವರೂ ಪಾಲ್ಗೊಳ್ಳುವ ಮೂಲಕ ಪ್ರಯೋಜನ ಪಡೆದುಕೊಳ್ಳಬಹುದು.
ಭಾನುವಾರ (ಜೂ 4) ಬೆಳಿಗ್ಗೆ 10.35ಕ್ಕೆ ವೃತ್ತಿ ಬದುಕಿನ ಕುರಿತು ಗುರುರಾಜ ಬುಲಬುಲೆ ಅವರಿಂದ ಉಪನ್ಯಾಸ. 11.15ಕ್ಕೆ ಕಾಮೆಡ್ ಕೆ ಕೌನ್ಸೆಲಿಂಗ್ ಪೂರ್ವ ತಯಾರಿ ಕುರಿತು ರಾಮರಾವ್ ಉಪನ್ಯಾಸ. 11.45ಕ್ಕೆ ಸಿಇಟಿ ಕೌನ್ಸೆಲಿಂಗ್ ಪೂರ್ವ ತಯಾರಿ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಎನ್. ರವಿ ಅವರಿಂದ ಉಪನ್ಯಾಸ. 12.30ಕ್ಕೆ ಸಮಾರೋಪ.
ಪಿಯುಸಿ ನಂತರ ಆಯ್ಕೆ ಮಾಡಿಕೊಳ್ಳುವ ಕೋರ್ಸ್ ಕುರಿತು ಸ್ಪಷ್ಟ ಚಿತ್ರಣವನ್ನು ಕಳೆದ ಎಂಟು ವರ್ಷಗಳಿಂದ ‘ಜ್ಞಾನ ದೇಗುಲ’ ಮೇಳ ನೀಡುತ್ತಾ ಬಂದಿದೆ. ಇದು ವಿದ್ಯಾರ್ಥಿಗಳಿಗೆ ಒದಗಿ ಬಂದಿರುವ ಸುವರ್ಣಾವಕಾಶವಾಗಿದೆ.
ಒಂಬತ್ತನೇ ವರ್ಷದ ಮೇಳದಲ್ಲಿ ವೃತ್ತಿಪರ ಕೋರ್ಸ್ ಪ್ರವೇಶದ ಮಾಹಿತಿ, ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣ, ವೈಯ ಕ್ತಿಕ ಮಾರ್ಗದರ್ಶನ, ಶಿಕ್ಷಣ ತಜ್ಞರ ಜೊತೆ ಸಂವಾದ, ಹಿರಿಯರ ಜೊತೆ ಮಾತುಕತೆ, ಶಿಕ್ಷಣ ಸಾಲ ಕುರಿತು ಬ್ಯಾಂಕ್ಗಳಿಂದ ಮಾಹಿತಿ, ವಿದೇಶದಲ್ಲಿನ ಶೈಕ್ಷಣಿಕ ಅವಕಾಶಗಳ ಕುರಿತ ಮಾಹಿತಿ ನೀಡಲಾಗುತ್ತಿದೆ.
ಈ ಹಿಂದೆ ಆಯೋಜಿಸಿದ್ದ ಮೇಳಗಳಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ಪಾಲ್ಗೊಂಡಿದ್ದವು. ಈ ಬಾರಿ ಇನ್ನಷ್ಟು ಸಂಸ್ಥೆಗಳು ಮೇಳದ ಭಾಗವಾಗುತ್ತಿವೆ. ವಿದ್ಯಾರ್ಥಿಗಳು, ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಆಸಕ್ತರು www.eduverse.net ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ದಿವಾಕರ (94484 68405) ಅವರನ್ನು ಸಂಪರ್ಕಿಸಿ.
**
ಐ.ಸಿ.ಎಂ.ಎಸ್.ನ ಪ್ರಾಧ್ಯಾಪಕ ಶಿವಪ್ರಸಾದ ಪರಿಚಯ
ಶಿವಪ್ರಸಾದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಮತ್ತು ಪಿ.ಎಚ್.ಡಿ. ಪಡೆದಿದ್ದಾರೆ. ನವದೆಹಲಿಯಲ್ಲಿರುವ ರಾಷ್ಟ್ರೀಯ ಭೌತಿಕ ಪ್ರಯೋಗಾಲಯದಲ್ಲಿ 1985ರಿಂದ 2007ರ ವರೆಗೆ ಮುಖ್ಯ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ. 2007 ರಿಂದ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಅವರ 220 ಸಂಶೋಧನಾ ವರದಿಗಳು ಅಂತರರಾಷ್ಟ್ರೀಯ ಜರ್ನಲ್ಗಳಲ್ಲಿ ಪ್ರಕಟಗೊಂಡಿವೆ. 190 ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.
1992ರಲ್ಲಿ ಉತ್ತಮ ಯುವ ವಿಜ್ಞಾನಿ, 2010ರಲ್ಲಿ ಸಿ.ಎನ್.ಆರ್. ರಾವ್ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ಡಾ.ರಾಜಾರಾಮಣ್ಣ ಹಿರಿಯ ವಿಜ್ಞಾನಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಿ.ಎಸ್.ಐ.ಆರ್, ಜೆ.ಆರ್.ಎಫ್, ಎಸ್.ಆರ್.ಎಫ್ ಮತ್ತು ಪಿ.ಡಿ.ಎಫ್ ಸ್ಕಾಲರ್ಶಿಪ್ ಪಡೆದಿದ್ದಾರೆ.
**
ಎಜುವರ್ಸ್ನಲ್ಲಿ ಇಂದು
ಬೆಳಿಗ್ಗೆ 10ಕ್ಕೆ ಉದ್ಘಾಟನೆ
ಬೆಳಿಗ್ಗೆ 10.20ಕ್ಕೆ ಪ್ರೊ ಎಸ್.ಎಂ. ಶಿವಪ್ರಸಾದ್ ಅವರಿಂದ ಪ್ರಧಾನ ಭಾಷಣ
ಬೆಳಿಗ್ಗೆ 11.30ಕ್ಕೆ ಕಾಮೆಡ್ ಕೆ ಕೌನ್ಸೆಲಿಂಗ್ ಪೂರ್ವ ತಯಾರಿ ಕುರಿತು ರಾಮರಾವ್ ಅವರಿಂದ ಉಪನ್ಯಾಸ
ಮಧ್ಯಾಹ್ನ 12ಕ್ಕೆ ಸಿಇಟಿ ಕೌನ್ಸೆಲಿಂಗ್ ತಯಾರಿ ಕುರಿತು ನಿವೃತ್ತ ನೋಡಲ್ ಅಧಿಕಾರಿ ಜಿ.ಎ. ತಿಗಡಿ ಅವರಿಂದ ಉಪನ್ಯಾಸ
ಮಧ್ಯಾಹ್ನ 2.30ಕ್ಕೆ ನೀಟ್ ಮತ್ತು ಜೆ.ಇ.ಇ ಕುರಿತು ಸಂವಾದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.