ಭಟ್ಕಳ (ಉತ್ತರ ಕನ್ನಡ): ಸಮೀಪದ ಬೈಂದೂರು ತಾಲ್ಲೂಕು ವ್ಯಾಪ್ತಿಯ ಒತ್ತಿನೆಣೆಯಲ್ಲಿ ಬುಧವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ–66ರ ಮೇಲೆ ಗುಡ್ಡಕುಸಿದು ಐದು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಹೆದ್ದಾರಿ ವಿಸ್ತರಣೆ ಕಾಮಗಾರಿಗಾಗಿ ಗುಡ್ಡವನ್ನು ಅಗೆಯಲಾಗಿತ್ತು. ಕೆಲವು ದಿನಗಳಿಂದ ಇಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಗುಡ್ಡ ಕುಸಿದು ಹೆದ್ದಾರಿ ಮೇಲೆ ಬಿದ್ದಿದೆ.
ಇದರಿಂದ ಭಟ್ಕಳ– ಮಂಗಳೂರು ನಡುವಿನ ವಾಹನ ಸಂಚಾರಕ್ಕೆ ಅಡಚಣೆ ಆಯಿತು. 5 ತಾಸು ಜನರು ಪರದಾಡಿದರು.
ಬೆಳಗಿನಜಾವ 4.30ಕ್ಕೆ ಗುಡ್ಡ ಕುಸಿದರೂ, ತೆರವು ಕಾರ್ಯಾಚರಣೆ ಆರಂಭವಾಗಿದ್ದು 7.30ಕ್ಕೆ. ಎರಡು ತಾಸು ಕಾರ್ಯಾಚರಣೆ ನಡೆಸಿ, ಹೆದ್ದಾರಿ ಮೇಲೆ ಹರಡಿದ್ದ ಮಣ್ಣನ್ನು ತೆರವುಗೊಳಿಸಲಾಯಿತು.