ಹಾವೇರಿ: ಬಗರ್ ಹುಕುಂ ಭೂಮಿಗೆ ಆಗ್ರಹಿಸಿ ರೈತರು ನಗರದಲ್ಲಿ ಸೋಮವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ರೈತರೊಬ್ಬರು ವಿಷ ಸೇವಿಸಲು ಯತ್ನಿಸಿದ್ದಾರೆ. ರಾಣಿಬೆನ್ನೂರು ಹನುಮಾಪುರದ ರೈತ ಕಾಳಪ್ಪ ಲಮಾಣಿ ಅವರು ಬೆತ್ತಲಾದ ಘಟನೆಯೂ ನಡೆದಿದೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ಕೈಗೊಂಡಿದ್ದರು. ಅರೆ ಬೆತ್ತಲೆಯಾಗಿ ಮೆರವಣಿಗೆ ನಡೆಸಿದರು. ರೈತರೊಬ್ಬರು ಸೊಂಟಕ್ಕೆ ಬೇವಿನ ಸೊಪ್ಪು ಕಟ್ಟಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಹಲಗೆ ಬಾರಿಸುತ್ತಾ ನಡೆದ ಮೆರವಣಿಗೆಯಲ್ಲಿ ರೈತರೊಬ್ಬರು ಪ್ರತಿಭಟನೆ ಸಂಕೇತವಾಗಿ ತಲೆ ಮೇಲೆ ಕಲ್ಲು ಹೊತ್ತು ಸಾಗಿದರು.
ರಾಣಿಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದ ರೈತ ಚಂದ್ರಪ್ಪ ಗುತ್ತೂರು ವಿಷ ಸೇವನೆಗೆ ಯತ್ನಿಸಿದವರು. ತಕ್ಷಣ ಚಂದ್ರಪ್ಪ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಹಿರೇಕೆರೂರ ತಾಲ್ಲೂಕಿನ ಆಲದಗೇರಿಯ ರೈತ ಶಿವಪ್ಪ ಹಲಗೇರಿ ಅವರ ಕೈಯಿಂದ ವಿಷದ ಬಾಟಲಿಯನ್ನು ಪೊಲೀಸರು ಕುಸಿದುಕೊಂಡಿದ್ದಾರೆ.
ಪ್ರತಿಭಟನೆ ವೇಳೆ ಬೆತ್ತಲಾದ ರೈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.