ಮುಂಬೈ: ಕಾಯಿಲೆಯಿಂದ ಬಳಲುತ್ತಿದ್ದ ಯುವತಿಯನ್ನು ಥಳಿಸಿದ ಮಾಂತ್ರಿಕನೊಬ್ಬ ಆಕೆಗೆ ಬಲವಂತವಾಗಿ ಸಗಣಿ ತಿನ್ನಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಯುವತಿಯ ತಂದೆ ಹಾಗೂ ಮಾಂತ್ರಿಕ ಸೇರಿದಂತೆ ಆರು ಮಂದಿ ವಿರುದ್ಧ ಚಾಕೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಮಾಂತ್ರಿಕನ ಪತ್ತೆಗಾಗಿ ಪೊಲೀಸರ ಒಂದು ತಂಡವನ್ನು ಬೀದರ್ ಜಿಲ್ಲೆಗೆ ಕಳುಹಿಸಲಾಗಿದೆ.
ಬಿ.ಎ ವ್ಯಾಸಂಗ ಮಾಡುತ್ತಿರುವ 18 ವರ್ಷದ ಯುವತಿಯು ದೀರ್ಘಕಾಲದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದಳು ಎಂದು ಡಿಎಸ್ಪಿ ನಾಯಕ್ ಅವರು ತಿಳಿಸಿದ್ದಾರೆ.
ಯುವತಿಯು ಮಾಟಮಂತ್ರಕ್ಕೆ ಒಳಗಾಗಿರಬಹುದು ಎಂದು ಭಾವಿಸಿದ ಆಕೆಯ ಮನೆಯವರು ಜೂನ್ 4ರಂದು ಬೀದರ್ಗೆ ಕರೆದೊಯ್ದಿದ್ದರು. ಮೂರ್ಚೆರೋಗದಿಂದ ಬಳಲುತ್ತಿದ್ದ ಅದೇ ಗ್ರಾಮದ ಮತ್ತೊಬ್ಬ ಮಹಿಳೆಯನ್ನೂ ಅವರು ಜತೆಗೆ ಕರೆದೊಯ್ದಿದ್ದರು.
ಬೀದರ್ನಲ್ಲಿ ಚಿಕಿತ್ಸೆಯ ಹೆಸರಿನಲ್ಲಿ ನಿಷ್ಕರುಣೆಯಿಂದ ಅವರನ್ನು ಥಳಿಸಿ, ಸಗಣಿಯನ್ನು ತಿನ್ನುವಂತೆ ಒತ್ತಾಯಿಸಲಾಯಿತು. ಇದನ್ನು ಆರೋಪಿಯೊಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು.
ನರಬಲಿ, ಇತರ ಅಮಾನವೀಯ ಕೃತ್ಯಗಳು, ಅಘೋರಿ ಆಚರಣೆ ಮತ್ತು ಮಾಟ ಮಂತ್ರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.