ಧರ್ಮದ ಲಾಂಛನಗಳನ್ನು ದೇಹದ ಮೇಲೆ ಹೊತ್ತು ಮೆರೆವವರೆಲ್ಲ ಹೆಚ್ಚಿನದಾಗಿ ಪ್ರದರ್ಶನ ವ್ಯಸನಿಗಳು. ಲಾಂಛನದ ಅರ್ಥವನ್ನು ಅರಿವಾಗಿಸಿಕೊಂಡವರು ದೇಹವನ್ನೇ ಧರ್ಮದ ಗುಡಿಯಾಗಿಸಿಕೊಂಡಿರುತ್ತಾರೆ. ಗುಡಿಯೊಳಗಿನ ದೈವಕ್ಕೆ ಅನುಭಾವವೇ ಆರಾಧನೆ. ಅನುಭಾವಕ್ಕೆ ಗುರುಲಿಂಗ-ಜಂಗಮವೆಂಬುದು ಜೀವಜೀವದ ಬೆಳಗು. ಹಾಗಾದಾಗ ಅರಿವೇ ಅಧ್ಯಾತ್ಮ.
ಅರಿವು ಸಂಬಂಧವುಳ್ಳ ಪರಿಪೂರ್ಣ ಜ್ಞಾನಿಗಳ
ಅಡಿಗಳಿಗೆ ನಾನೆರಗುವೆನಯ್ಯಾ
ಎಡೆದೆರಹಿಲ್ಲದೆ ಮೃಡನ ನೆನೆವವರ
ಅಡಿಗಳಿಗೆ ನಾನೆರಗುವೆನಯ್ಯಾ
ಕಡುಗಲಿಗಳ ಕಂಡಂತೆ ಪರಶಿವನೆಂಬೆನಯ್ಯಾ
ಅಮುಗೇಶ್ವರ ಲಿಂಗವನರಿದ ಘನಮಹಿಮನೆಂಬೆನಯ್ಯಾ
-ಎಂದು ಇಂಥ ಮಹಾಂತರ ಬಗ್ಗೆ ಅಮುಗೆ ರಾಯಮ್ಮ ಗುಣಗೌರವದಲ್ಲಿ ಮಾತನಾಡಿದ್ದಾಳೆ. ಸದಾ ಪ್ರದರ್ಶನವೆಂಬುದು ಸಾಧಕನಾಗದವನ ಸಣ್ಣತನ. ಭಾವಿತವಾಗದ ಭಾಷೆ ಅರ್ಥಭಾರದ ಹಂಗು ಶಬ್ದ. ಅರ್ಥದ ಹಂಗಿಗೆ ಬಿದ್ದು ಗುರುಲಿಂಗಜಂಗಮದ ಹೆಸರಿನಲ್ಲಿ ವಸ್ತು ಸಂಕೇತಗಳನ್ನು ಸದಾ ಹೊತ್ತು ತಿರುಗುವವರನ್ನು ಕುರಿತು ಅಮುಗೆ ರಾಯಮ್ಮ ಛೇಡಿಸಿ ಮಾತನಾಡಿದ್ದಾಳೆ.
ಉದರ ಪೋಷಣಕ್ಕೆ ಗಿಡುಗಿಡುದಪ್ಪದೆ ತಿರುಗುವ ಕುನ್ನಿ
ಒಡೆಯನ ಗುರುತು ಬಲ್ಲುದೆ?
ಮಳೆಗಾಲದಲ್ಲಿ ಮೀನು ಮಿಡಿಚೆಯ ತಿಂಬ ನರಿ
ಬೆಳುದಿಂಗಳ ಬಲ್ಲುದೆ?
ಸತ್ತ ಹಂದಿಯ ತಿಂಬ ನಾಯಿ
ಕತ್ತಲೆಯ ಬಲ್ಲುದೆ?
ಕರ್ತನನರಿಯದ ವೇಷಧಾರಿಗಳು
ನಿಮ್ಮನೆತ್ತ ಬಲ್ಲರು ಅಮುಗೇಶ್ವರಾ?
-ಎಂದು ಹೇಳುತ್ತಾಳೆ. ಶರಣರಿಗೆ ಲಿಂಗಾಯತವೆಂಬುದು ಪ್ರದರ್ಶನದ ಸರಕಲ್ಲ; ಅದು ನಿಜದ ಬದುಕು. ನಿಸರ್ಗ ಧರ್ಮಕ್ಕೆ ಎರವಾಗದ ಬಾಳುವೆಯ ನಿಲುವು.
ಕಾಲಿಲ್ಲದ ಕುದುರೆಯನೇರಿ ರಾವುತಿಗೆಯ ಮಾಡಬೇಕು
ಕಡಿವಾಣವಿಲ್ಲದ ಕುದುರೆಯ ನಿಲಿಸಬೇಕು
ಕಾಲಿಲ್ಲದ ಕುದುರೆಯ ಬೀದಿಯಲ್ಲಿ ಕುಣಿಪಾಡ ಬಲ್ಲಡೆ
ಇಹಲೋಕಕ್ಕೆ ವೀರನೆಂಬೆ ಪರಲೋಕಕ್ಕೆ ಧೀರನೆಂಬೆ
ಅಮುಗೇಶ್ವರ ಲಿಂಗಕ್ಕೆ ಅಧಿಕನೆಂಬೆ
-ಇದು ಅಮುಗೆ ರಾಯಮ್ಮನು ಸತ್ಯಶುದ್ಧ ಸಾಧಕರ ಬಗ್ಗೆ ತೋರುವ ನುಡಿಗೌರವ. ಇದುವೆ ನಿತ್ಯನಾಗಿ ಇಷ್ಟಲಿಂಗವನಪ್ಪಿದ ಶರಣನ ಇರವು; ಆದರೆ ಮನೋ ನಿಗ್ರಹವಿಲ್ಲದೆ ಹೋದಾಗ ಮಂತ್ರದ ಹಸರ ಲಾಂಛನಗಳ ಪಸರವೆಂಬುದು ಡಾಂಬಿಕತೆಯ ಬಣಗು. ನಿಜಸಾಧಕನ ಅಧ್ಯಾತ್ಮದ ಬಗೆಯೆಂಬುದು ಕತ್ತಲೆಯ ಮನೆಯಲ್ಲಿ ಮಧುರವ ಸವಿದಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.