ಬೆಂಗಳೂರು: ಉಪನಗರ (ಸಬರ್ಬನ್) ರೈಲು ಯೋಜನೆ ಜಾರಿಗೆ ಇರುವ ತೊಡಕುಗಳನ್ನು ರಾಜ್ಯ ಸರ್ಕಾರ ನಿವಾರಿಸಿದರೆ, ಯೋಜನೆ ಅನುಷ್ಠಾನಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ರೈಲ್ವೆ ಸಚಿವ ಸುರೇಶ್್ ಪ್ರಭು ಹೇಳಿದರು.
ಯಶವಂತಪುರ, ಹುಬ್ಬಳ್ಳಿ, ತೋರಣಗಲ್ ರೈಲು ನಿಲ್ದಾಣಗಳಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರಿಗೆ ಉಪನಗರ ರೈಲು ಅಗತ್ಯ ಇದೆ. ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ಚರ್ಚೆ ನಡೆಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ರೈಲು ಸಂಚಾರ ವ್ಯವಸ್ಥೆಯಲ್ಲಿ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. ಹಾಲಿ ಇರುವ ರೈಲ್ವೆ ಹಳಿಗಳನ್ನು ಮೀಟರ್ಗೇಜ್ನಿಂದ ಬ್ರಾಡ್ಗೇಜ್ಗೆ ಪರಿವರ್ತನೆ, ಹಳೆಯ ಬೋಗಿಗಳ ಬದಲಾವಣೆ, ರೈಲುಗಳ ವೇಗಮಿತಿ ಹೆಚ್ಚಳ, ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ವಿವರಿಸಿದರು.
‘ರೈಲ್ವೆ ಇಲಾಖೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ ₹ 1 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವುದು ನಮ್ಮ ಉದ್ದೇಶ’ ಎಂದು ಸುರೇಶ್ಪ್ರಭು ಹೇಳಿದರು.
ಕೇಂದ್ರ ಹೆಚ್ಚು ಪಾಲು ನೀಡಲಿ: ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ, ‘ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು ಉಪನಗರ ರೈಲ್ವೆ ಯೋಜನೆ ಅಗತ್ಯವಾಗಿ ಬೇಕಿದೆ.
ಆದರೆ, ಪ್ರಸ್ತುತ ಯೋಜನೆ ಪ್ರಕಾರ ರಾಜ್ಯ ಸರ್ಕಾರ ಶೇ 80ರಷ್ಟು ಮತ್ತು ಕೇಂದ್ರ ಸರ್ಕಾರ ಶೇ 20ರಷ್ಟು ವೆಚ್ಚ ಸರಿದೂಗಿಸಬೇಕು. ಇದರಿಂದ ರಾಜ್ಯದ ಮೇಲೆ ಒತ್ತಡ ಹೆಚ್ಚುತ್ತದೆ. ಆದ್ದರಿಂದ ಪುನರ್ ಪರಿಶೀಲಿಸಿ ಕೇಂದ್ರ ನೆರವು ಒದಗಿಸಬೇಕು’ ಎಂದರು.