ಬೆಂಗಳೂರು: ನಗರೋತ್ಥಾನ ಯೋಜನೆಯ ಅನುದಾನದಡಿ ಕೆ.ಆರ್.ಪುರ ಸಮೀಪದ ಹೊರಮಾವು ಅಗರ ಕೆರೆ ಪುನಶ್ಚೇತನ ಕಾಮಗಾರಿಗೆ ಶನಿವಾರ ಚಾಲನೆ ನೀಡಲಾಯಿತು.
ಬಳಿಕ ಮಾತನಾಡಿದ ಶಾಸಕ ಬಿ.ಎ.ಬಸವರಾಜು, ‘ಕೆರೆ ಅಭಿವೃದ್ಧಿಗೆ ನಗರೋತ್ಥಾನದಡಿ ₹3 ಕೋಟಿ ಅನುದಾನ ಸಿಕ್ಕಿದೆ. ಆದರೆ, ಈ ಅನುದಾನ ಸಾಕಾಗುವುದಿಲ್ಲ. ಇನ್ನೂ ₹2 ಕೋಟಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ’ ಎಂದರು.
‘ಕೆರೆಯ ಹೂಳು ಹಾಗೂ ಕಳೆ ತೆಗೆಯುವುದು, ತಂತಿ ಬೇಲಿ, ನಡಿಗೆ ಪಥ ನಿರ್ಮಾಣ, ವಿದ್ಯುತ್ದೀಪಗಳನ್ನು ಅಳವಡಿಸಲಾಗುತ್ತದೆ. ಈ ಕಾಮಗಾರಿಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು’ ಎಂದು ಹೇಳಿದರು.
‘ಕೆರೆ ಆವರಣದಲ್ಲಿ ಉದ್ಯಾನ ನಿರ್ಮಾಣ ಮಾಡಲಾಗುತ್ತದೆ. ಕೆಲವರು ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.
‘ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೌದೇನಹಳ್ಳಿ ಕೆರೆ, ಶೀಗೆಹಳ್ಳಿ ಕೆರೆ, ದೊಡ್ಡ ಬಸವನಪುರ ಕೆರೆಗಳನ್ನು ₹13 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಅಪಾರ್ಟ್ಮೆಂಟ್ ಸಮುಚ್ಚಯಗಳಿಂದ ಕೊಳಚೆ ನೀರು ಕೆರೆಗೆ ಸೇರದಂತೆ ಪ್ರತ್ಯೇಕ ಪೈಪ್ಲೈನ್ ಅಳವಡಿಸಲಾಗುತ್ತದೆ’ ಎಂದರು.
‘ಕೆರೆಗೆ ಕಸ, ಕಟ್ಟಡದ ಅವಶೇಷಗಳನ್ನು ಸುರಿಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಹೇಳಿದರು.