ಬೆಂಗಳೂರು: ಬಿಬಿಎಂಪಿ ಹಾಗೂ ದೇಸಿ ಫೌಂಡೇಷನ್ ಆಶ್ರಯದಲ್ಲಿ ಕೆ.ಆರ್.ಪುರ ಸಮೀಪದ ಕಲ್ಕೆರೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ‘ದೇಸಿ ಕ್ರೀಡೆಗಳ ಅಂಗಳ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗಿಲ್ಲಿದಾಂಡು, ಗೋಲಿ ಆಟ, ಕುಂಟೆ ಬಿಲ್ಲೆ, ಸೈಕಲ್ ಟೈರ್ ಓಡಿಸುವುದು, ಮೊಸರು ಕುಡಿಕೆ ಒಡೆಯುವುದು, ಉಯ್ಯಾಲೆ, ಕಬಡ್ಡಿ, ಜಲ್ಲಿಕೋಲು, ಹಗ್ಗಜಗ್ಗಾಟ, ಖೊಖೊ, ಲಗೋರಿ ಆಟಗಳನ್ನು ಆಡಿಸಲಾಯಿತು. ಇದರಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.
ಆಟಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.
‘ಇಂದಿನ ಯುವಜನರು ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ಗಳಲ್ಲಿ ಮಗ್ನರಾಗಿರುತ್ತಾರೆ. ಮಕ್ಕಳು ಮೊಬೈಲ್, ಕಂಪ್ಯೂಟರ್ಗಳಲ್ಲಿ ಆಟವಾಡುವ ಕಡೆಗೇ ಹೆಚ್ಚು ಗಮನ ನೀಡುತ್ತಿದ್ದಾರೆ. ಇದರಿಂದ ಗ್ರಾಮೀಣ ಆಟಗಳು ನಶಿಸುತ್ತಿವೆ’ ಎಂದು ಪಾಲಿಕೆ ಸದಸ್ಯೆ ಪದ್ಮಾವತಿ ಶ್ರೀನಿವಾಸ್ ವಿಷಾದ ವ್ಯಕ್ತಪಡಿಸಿದರು.