‘ನೇನೇ ರಾಜು ನೇನೇ ಮಂತ್ರಿ’ ಸಿನಿಮಾದ ಪೋಸ್ಟರ್ನಲ್ಲಿ ರಾನಾ ದಗ್ಗುಬಾಟಿ ದಟ್ಟ ಹೊಗೆ ಬಿಡುತ್ತಿರುವ ಚಿತ್ರ ಫೇಸ್ಬುಕ್ ಗೋಡೆಗಳ ಮೇಲಷ್ಟೆ ಅಲ್ಲ ಸಾರ್ವಜನಿಕ ಸ್ಥಳಗಳಲ್ಲಿಯೂ ರಾರಾಜಿಸುತ್ತಿತ್ತು. ಈಗ ‘ಅರ್ಜುನ್ ರೆಡ್ಡಿ’ ಸಿನಿಮಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾಯಕ ಬಿಯರ್ (?) ಕುಡಿಯುತ್ತಿರುವ ಚಿತ್ರವನ್ನೇ ಪೋಸ್ಟರ್ನಲ್ಲಿ ಬಳಸಿದೆ.
'ಹೆಂಡ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಸಭ್ಯ ಸಮಾಜಕ್ಕೆ ಅದೇನು ಸಂದೇಶ ಕೊಡ್ತೀರಿ?' ಎಂದು 'ದುವ್ವಾಡ ಜಗನ್ನಾಥಂ' ಚಿತ್ರದಲ್ಲಿ ಅಲ್ಲು ಅರ್ಜುನ್ ಕೇಳಿದ್ದರು. ಈಚೆಗೆ ಬಿಡುಗಡೆಯಾದ ತೆಲುಗು ಚಿತ್ರಗಳ ಪೋಸ್ಟರ್ ಗಮನಿಸಿದರೆ ಇದೇ ಪ್ರಶ್ನೆಯನ್ನು ತೆಲುಗು ಸಿನಿಮಾ ರಂಗಕ್ಕೇ ಕೇಳಬೇಕು ಎನಿಸುತ್ತದೆ.
ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರಾರಂಭಕ್ಕೂ ಮುನ್ನ ‘ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕರ’ ಎಂಬ ಧ್ವನಿ ಬರುವುದು ಕೇವಲ ತೋರಿಕೆಗಷ್ಟೇ ಈಗ ಬಹಿರಂಗ ಸತ್ಯ. ತಂಬಾಕು ಉತ್ಪನ್ನಗಳ ಜಾಹೀರಾತಿಗೆ ಹಲವು ಬಿಗಿ ನಿಯಮಗಳನ್ನು ರೂಪಿಸಿರುವ ಸರ್ಕಾರ ಚಿತ್ರರಂಗದ ಮೇಲೇಕೆ ಚಾಟಿ ಬೀಸುತ್ತಿಲ್ಲ ಎನ್ನುವುದು ಸದ್ಯದ ಪ್ರಶ್ನೆ.
ಇಷ್ಟದ ನಟರನ್ನು ಆರಾಧ್ಯ ದೇವರಂತೆ ಭಾವಿಸುವ ಯುವಕರು ಹೀರೋಗಳ ಆದರ್ಶವನ್ನೇ ಅನುಸರಿಸಲು ಹೋಗಿ ಧೂಮಪಾನ- ಮದ್ಯಪಾನ ವ್ಯಸನಿಗಳು ಆಗುವುದಿಲ್ಲವೇ ಎನ್ನುವುದು ಪೋಷಕರ ಆತಂಕ.
ಸಿನಿಮಾಗಳಲ್ಲಿ ದೇಶಭಕ್ತಿ, ಸಮಾಜ ಸೇವೆಯ ಬಗ್ಗೆ ಉದ್ದುದ್ದ ಭಾಷಣಗಳನ್ನು ಮಾಡುವ ಈ ನಟರು ಸಾಮಾಜಿಕ ಸ್ವಾಸ್ಥ್ಯದ ಬಗ್ಗೆಯೂ ಗಮನ ಹರಿಸಬೇಕಿದೆ.