ಹನೂರು: ‘ವಾಹನ ಸವಾರರು ಸದಾ ಜಾಗರೂಕರಾಗಿ ನಿಧಾನಗತಿಯಲ್ಲಿ ವಾಹನ ಚಲಾಯಿಸುವ ಮೂಲಕ ಸಂಚಾರ ನಿಯಮಗಳನ್ನು ಪಾಲಿಸಬೇಕು’ ಎಂದು ವಡ್ಡರದೊಡ್ಡಿಯ ಚರ್ಚ್ ಪಾದ್ರಿ ಕ್ರಿಸ್ಟೋಫರ್ ತಿಳಿಸಿದರು.
ಪಟ್ಟಣ ಸಮೀಪದ ವಡ್ಡರದೊಡ್ಡಿ ಚರ್ಚ್ ಆವರಣದಲ್ಲಿ ಶುಕ್ರವಾರ ಆಯುಧಪೂಜೆ ಅಂಗವಾಗಿ ನಡೆದ ಸಮಾರಂಭದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ವೇಗದ ವಾಹನ ಚಾಲನೆ ಸಾಮಾನ್ಯವಾಗಿದೆ. ಅತಿ ವೇಗದಿಂದ ಚಲಾಯಿಸಿ ಅಪಘಾತಕ್ಕೆ ತುತ್ತಾಗಿ ಸಾವಿಗೀಡಾಗುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಸ್ತೆ ಅಪಘಾತದಲ್ಲಿ ಮೃತಪಡುತ್ತಿರುವವರ ಸಂಖ್ಯೆ ಎರಡು ವರ್ಷದಿಂದೀಚೆಗೆ ಶೇ 60ರಷ್ಟು ಅಧಿಕವಾಗಿದೆ. ನಿಧಾನ ಗತಿಯಲ್ಲಿ ವಾಹನ ಚಲಾಯಿಸಿ, ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾಕಷ್ಟು ಅರಿವು ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದರೂ ವಾಹನ ಸವಾರರು ಅದಕ್ಕೆ ಸ್ಪಂದಿಸದಿರುವುದು ಇಂತಹ ಅವಘಡಗಳಿಗೆ ಕಾರಣವಾಗಿದೆ ಎಂದರು.
ಅತಿ ವೇಗವಾಗಿ ವಾಹನ ಚಲಾಯಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ನಲ್ಲಿ ಮಾತ ನಾಡುವುದು, ರಸ್ತೆಯ ಬಲಭಾಗದಲ್ಲಿ ವಾಹನ ಚಲಾಯಿಸುವುದು ಮುಂತಾದವು ಸಂಚಾರ ನಿಯಮದ ಉಲ್ಲಂಘನೆಗಳಾಗಿವೆ. ವಾಹನ ಚಾಲಕರು ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.