ಯಮಕನಮರಡಿ: ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಒದಗಿಸಿದ್ದಕ್ಕಾಗಿ ಹತ್ತರಕಿ ಗ್ರಾಮ ಪಂಚಾಯ್ತಿಗೆ ರಾಜ್ಯ ಸರ್ಕಾರದ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ ಎಂದು ಅಧ್ಯಕ್ಷ ಮಹಾದೇವ ಪಟೋಳಿ ಹೇಳಿದರು.
ಬೆಂಗಳೂರಲ್ಲಿ ಇತ್ತೀಚೆಗೆ ಪಂಚಾಯ್ತಿ ಸದಸ್ಯರನ್ನು ಪಂಚಾಯ್ತಿ ರಾಜ್ಯ ಸಚಿವ ಎಚ್.ಕೆ. ಪಾಟೀಲ ಸತ್ಕರಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ ಬಳಿಕ ಗ್ರಾಮದಲ್ಲಿ ನಡೆದ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಹುಕ್ಕೇರಿ ತಾಲ್ಲೂಕಿನಲ್ಲಿ ನಾಲ್ಕು ಗ್ರಾಮ ಪಂಚಾಯ್ತಿಗಳು ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿವೆ ಎಂದರು. ಈ ಪ್ರಶಸ್ತಿ ಲಭಿಸಲು ಶಾಸಕ ಸತೀಶ ಜಾರಕಿಹೊಳಿ ಕಾರಣ ಎಂದು ಅವರು ಹೇಳಿದರು.
ಪಂಚಾಯ್ತಿ ವ್ಯಾಪ್ತಿಯ ಐದು ಗ್ರಾಮಗಳನ್ನು ಬಯಲು ಶೌಚಾಲಯ ಮುಕ್ತ ಗ್ರಾಮ ಮಾಡಲಾಗಿದೆ. ಯುವ ಧುರೀಣ ರವಿ ಜಿಂಡ್ರಾಳಿ ಅವರು ಸದಸ್ಯರನ್ನು ಸತ್ಕರಿಸಿ ಶಾಸಕರ ಕೊಡುಗೆಗಳನ್ನು ತಿಳಿಸಿದರು.
ವೇದಿಕೆಯಲ್ಲಿ ಹುಕ್ಕೇರಿ ತಾಲ್ಲೂಕು ಅಧ್ಯಕ್ಷ ದಸ್ತಗೀರ ಬಸಾಪೂರಿ, ವಿಠ್ಠಲ ಕಡಗಾಂವಿ, ಸಿದ್ದಣ್ಣ ಹಾಲದೇವರಮಠ, ಮಲ್ಲೇಶ ಪೂಜೇರಿ, ಪ್ರಕಾಶ ಬಿಸಿರೊಟ್ಟಿ, ಶ್ರೀಧರ ಗಂಭೀರ, ಪಿಡಿಒ ಸಿ.ಕೆ. ತಳವಾರ ಇದ್ದರು.