ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಸಲುವಾಸಿಗಳಿಗೆ ಮರೀಚಿಕೆಯಾದ ಶೌಚಾಲಯ

Last Updated 6 ಅಕ್ಟೋಬರ್ 2017, 7:10 IST
ಅಕ್ಷರ ಗಾತ್ರ

ಮದ್ದೂರು: ಮಂಡ್ಯ ಜಿಲ್ಲೆಯನ್ನು ಬಯಲು ಶೌಚಮುಕ್ತ ಜಿಲ್ಲೆ ಎಂದು ಸರ್ಕಾರ ಘೋಷಿಸಿದೆ. ಆದರೆ ಪಟ್ಟಣ ಸೇರಿ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಇಂದಿಗೂ ಬಯಲು ಶೌಚ ಮುಂದುವರಿದಿದೆ. ಪಟ್ಟಣದ ಸಿದ್ಧಾರ್ಥ ನಗರ, ಚನ್ನೇಗೌಡ ಬಡಾವಣೆ, ತಮಿಳು ಕಾಲೊನಿಗಳಲ್ಲಿ ಬಹುತೇಕ ಕೂಲಿ ಕಾರ್ಮಿಕರೇ ಹೆಚ್ಚು ವಾಸವಿದ್ದಾರೆ. ಈ ಬಡಾವಣೆಯಲ್ಲಿ ಶೇ 25ಕ್ಕೂ ಹೆಚ್ಚು ಜನರು ಇಂದಿಗೂ ಗುಡಿಸಲುವಾಸಿಗಳಾಗಿದ್ದಾರೆ.

ಈ ಗುಡಿಸಲುಗಳಲ್ಲಿ ಶೌಚಾಲಯ ಇಲ್ಲದ ಕಾರಣ ಇಲ್ಲಿನ ನಿವಾಸಿಗಳು ಪಟ್ಟಣದಲ್ಲಿ ಹಾದುಹೋಗುವ ಕೆಮ್ಮಣ್ಣುನಾಲೆಯ ರಸ್ತೆ ಬದಿ ಹಾಗೂ ಅಕ್ಕಪಕ್ಕದ ಜಮೀನುಗಳನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ.

ನಗರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈದ್ಯನಾಥಪುರದ ಬಳಿ ರಸ್ತೆ ಬದಿಯಲ್ಲಿ 10 ತಮಿಳು ಕುಟುಂಬಗಳು ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿವೆ. ಈ ಗುಡಿಸಲುಗಳಲ್ಲೂ ಶೌಚಾಲಯ ಇಲ್ಲ. ಆಲೂರು ಗ್ರಾಮದ ನಟರಾಜು ಅವರ ಮನೆಯಲ್ಲಿ ಸ್ಥಳವಕಾಶದ ಕೊರತೆಯಿಂದಾಗಿ ಇಂದಿಗೂ ಶೌಚಾಲಯ ನಿರ್ಮಿಸಿಕೊಂಡಿಲ್ಲ.

‘ಮನೆಯಲ್ಲಿ ಜಾಗ ಇಲ್ಲದ ಕಾರಣ ಶೌಚಾಲಯ ನಿರ್ಮಿಸಿಕೊಂಡಿಲ್ಲ. ಬಚ್ಚಲು ಮನೆಯಲ್ಲಿ ನಿರ್ಮಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಸಣ್ಣ ಮನೆಯಲ್ಲಿ ಶೌಚಾಲಯಕ್ಕೆ ಜಾಗ ಇಲ್ಲ’ ಎಂದು ನಟರಾಜು ಅವರ ಪುತ್ರಿ ಸುಮಾ ಹೇಳಿದರು.

ಸೌದೆ ಸಂಗ್ರಹಕ್ಕೆ ಶೌಚಾಲಯ: ತಾಲ್ಲೂಕಿನ ಶಿಂಷಾನದಿ ಎಡ ಹಾಗೂ ಬಲದಂಡೆ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸಲಾಗಿದ್ದರೂ, ಆ ಶೌಚಾಲಯಗಳು ಸೌದೆ ಇನ್ನಿತರ ವಸ್ತುಗಳ ಸಂಗ್ರಹಕ್ಕೆ ಬಳಸಿಕೊಳ್ಳಲಾಗಿದೆ. ಬಹುತೇಕ ಜನರು ಶಿಂಷಾನದಿ ಬಯಲನ್ನು, ವಿಶ್ವೇಶ್ವರಯ್ಯ ನಾಲೆಗಳ ಬಯಲು ಪ್ರದೇಶವನ್ನು ಬಳಸುತ್ತಿದ್ದಾರೆ.

ಪಟ್ಟಣದ ಹೊರವಲಯದಲ್ಲಿ ಉತ್ತರ ಕರ್ನಾಟಕದಿಂದ ಬಂದ ಕಬ್ಬು ಕಡಿಯುವ ಕಾರ್ಮಿಕರು ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿತುಸತ್ತಿದ್ದಾರೆ. ಅವರು ಸುತ್ತಲಿನ ಜಾಗವನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ.

‘ತಾಲ್ಲೂಕಿನಲ್ಲಿ ಬಯಲು ಶೌಚ ಮುಂದುವರಿದಿದೆ. ಬೆಳಿಗ್ಗೆ ಸಮಯದಲ್ಲಿ ಕೆರೆಗಳ ಬಳಿಗೆ ಹೋದರೆ ಬಯಲು ಶೌಚದ ಸಾಕ್ಷಾತ್‌ ದರ್ಶನವಾಗುತ್ತದೆ. ಆದರೆ ಸರ್ಕಾರ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಿರುವುದು ಹಲವು ಅನುಮಾನ ಹುಟ್ಟಿಸುತ್ತದೆ. ಅಧಿಕಾರಿಗಳು ಕಾರ್ಮಿಕರು ವಾಸಿಸುವ ಕಾಲೊನಿಗಳಿಗೆ ಭೇಟಿ ನೀಡಿ ಸತ್ಯ ಪರಿಶೀಲಿಸಬೇಕು’ ಎಂದು ಆಲೂರು ಗ್ರಾಮಸ್ಥರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT