ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರ ರಕ್ಷಣೆಗೆ ರಾಷ್ಟ್ರೀಯ ನೀತಿ

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ನೇತ್ರ ರಕ್ಷಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿ ರೂಪಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಈ ಮೂಲಕ ನೇತ್ರ ತಜ್ಞರ ಹಾಗೂ ಪರೀಕ್ಷಕರ ತರಬೇತಿ ಮತ್ತು ಕಾರ್ಯನಿರ್ವಹಣೆಯನ್ನು ನಿಯಂತ್ರಣಕ್ಕೆ ಒಳಪಡಿಸಲಾಗುತ್ತಿದೆ. ನೇತ್ರ ರಕ್ಷಣೆಯ ವಲಯ ಸದ್ಯಕ್ಕೆ ಯಾವುದೇ ರೀತಿಯ ನಿಯಂತ್ರಣದಲ್ಲಿ ಇಲ್ಲ. ಜತೆಗೆ ನೇತ್ರ ತಜ್ಞರಿಗೂ ಏಕರೂಪದ ಗುಣಮಟ್ಟದ ತರಬೇತಿಯೂ ಇಲ್ಲ. ಹೀಗಾಗಿ ಈ ರೀತಿಯ ನೀತಿ ಅಗತ್ಯವಿದೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಸಾವಿರಾರು ಮಂದಿ ನೇತ್ರ ತಜ್ಞರ ಹೆಸರಿನಲ್ಲಿ ದೃಷ್ಟಿ ಪರೀಕ್ಷೆ ಮತ್ತು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಇವರಲ್ಲಿ ಬಹುತೇಕರು ನೋಂದಣಿ ಮಾಡಿಸಿಕೊಂಡಿಲ್ಲ. ಮೂಲಗಳ ಪ್ರಕಾರ ಸುಮಾರು 90 ಸಾವಿರ ನೇತ್ರ ಪರೀಕ್ಷಕರು ರಾಷ್ಟ್ರೀಯ ಅಂಧತ್ವ ನಿಯಂತ್ರಣದ ಯೋಜನೆ (ಎನ್‌ಪಿಸಿಬಿ) ನೋಂದಾಯಿಸಿಕೊಂಡಿಲ್ಲ ಅಥವಾ ಇವರು ಕಣ್ಣಿಗೆ ಸಂಬಂಧಿಸಿದ ಪದವಿ ಕೋರ್ಸ್‌ ಅನ್ನು ಸಂಪೂರ್ಣಗೊಳಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ಚರ್ಚಿಸಲು ಸೋಮವಾರ ಆರೋಗ್ಯ ಸಚಿವಾಲಯ ಈ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರು, ದೃಷ್ಟಿ ಪರೀಕ್ಷಕರ ಸಭೆ ಕರೆದಿದೆ.

‘ದೃಷ್ಟಿ ಪರೀಕ್ಷೆ ನಡೆಸುವ ಅರ್ಹತೆ ಹೊಂದಿರುವವರು ಮಾತ್ರ ಕನ್ನಡಕ ಮತ್ತು ಔಷಧ ಶಿಫಾರಸು ಮಾಡಬೇಕು. ಆದರೆ, ಕನ್ನಡಕ ಮಾರಾಟ ಮಾಡುವ ಅಂಗಡಿಗಳಲ್ಲಿಯೂ ರೋಗಿಗಳ ನೇತ್ರ ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಾರೆ. ಜತೆಗೆ ಕನ್ನಡಕವನ್ನೂ ಶಿಫಾರಸು ಮಾಡುತ್ತಾರೆ. ಇವರು ಮಾನ್ಯತೆ ಪಡೆದ ಪದವಿ ಪಡೆದಿರುವುದಿಲ್ಲ ಮತ್ತು ತರಬೇತಿಯೂ ಇರುವುದಿಲ್ಲ. ಕೇವಲ ಕನ್ನಡಕ ಮಾರಾಟ ಮಾಡಲು ಮಾತ್ರ ಅರ್ಹತೆ ಹೊಂದಿರುತ್ತಾರೆ’ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೇತ್ರ ತಜ್ಞರಾದ ಪ್ರೊ. ಪ್ರವೀಣ್‌ ವಶಿಷ್ಠ ಹೇಳುತ್ತಾರೆ.

‘ಇನ್ನು ಕೆಲವರು ‌ತಮ್ಮ ಪೋಷಕರು ಅಥವಾ ಅವರ ತಾತನಿಂದ ಬಂದ ಬಳುವಳಿಯನ್ನೇ ವೃತ್ತಿಯನ್ನಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇವರಿಗೂ ಯಾವುದೇ ಪದವಿ ಅಥವಾ ತರಬೇತಿ ಇರುವುದಿಲ್ಲ. ಹೀಗಾಗಿಯೇ ಈ ಕ್ಷೇತ್ರವನ್ನು ವ್ಯವಸ್ಥಿತವಾಗಿ ನಿಯಂತ್ರಣಕ್ಕೆ ಒಳಪಡಿಸುವುದು ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸುತ್ತಾರೆ.

‘ಔಷಧದ ಅಂಗಡಿಗಳನ್ನು ಹಲವು ರೀತಿಯ ನಿಯಂತ್ರಣಕ್ಕೆ ಒಳಪಡಿಸಲಾಗಿದೆ. ಅಲ್ಲಿ ಫಾರ್ಮಾಸಿಸ್ಟ್‌ಗಳು ಇರಲೇಬೇಕು. ಅದೇ ರೀತಿ ಕನ್ನಡಕ ಅಂಗಡಿಗಳಲ್ಲೂ ಕಡ್ಡಾಯವಾಗಿ ತರಬೇತಿ ಪ‍ಡೆದವರನ್ನು ನಿಯೋಜಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

‘ಸದ್ಯಕ್ಕೆ ಕೆಲವು ಸಂಸ್ಥೆಗಳು ಅಲ್ಪಾವಧಿ ಕೋರ್ಸ್‌ಗಳನ್ನು ನಡೆಸುತ್ತಿವೆ.  ಆದರೆ, ಈ ಸಂಸ್ಥೆಗಳು ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ ಮತ್ತು ಪಠ್ಯಕ್ರಮ ಅನುಸರಿಸುತ್ತಿಲ್ಲ. ಇಂತಹ ಸಂಸ್ಥೆಗಳಲ್ಲಿ ತರಬೇತಿ ಪಡೆಯುವವರು ಹೆಚ್ಚು ಅಪಾಯಕಾರಿ.  ತಪ್ಪಾಗಿ ಒಂದು ಔಷಧದ ಹನಿಯನ್ನು ಹಾಕಿದರೂ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT