ಸ್ಥಿರಪಟ್ಟ
ಮುಂಬೈ, ಅ. 15– ಏರ್ ಇಂಡಿಯಾ ಸಂಸ್ಥೆ ತನ್ನ ಮಹಾರಾಜನನ್ನು ಉಚ್ಚಾಟನೆ ಮಾಡುವುದಿಲ್ಲ. ಈ ಸಂಸ್ಥೆಯ ಅಧ್ಯಕ್ಷ ಶ್ರೀ ಜೆ.ಆರ್.ಡಿ. ತಾತಾ ಅವರು ಆಕಾಶವಾಣಿ ಸಂದರ್ಶನದಲ್ಲಿ ಈ ಭರವಸೆ ಇತ್ತರು.
ಈ ಹೊಸ ಯುಗದಲ್ಲಿ ಹಳೆಯ ಕಾಲದ ಈ ಪುಟ್ಟ ಮಹಾರಾಜನಿಗೆ ಸ್ಥಾನವಿಲ್ಲ. ಅವನನ್ನು ತೆಗೆದುಹಾಕಬೇಕು ಎಂಬುದು ಕೆಲವರ ಭಾವನೆ. ಆದರೆ ಅವನು ಇರಬೇಕೆಂದು ನಾನು ಮತ್ತು ನನ್ನ ಸಹೋದ್ಯೋಗಿಗಳು ನಿಶ್ಚಯಿಸಿದ್ದೇವೆ ಎಂದರವರು. ‘ಈ ಪುಟ್ಟ ವ್ಯಕ್ತಿ ನಮಗೆ ಉತ್ತಮ ಸೇವೆ ಸಲ್ಲಿಸಿದ್ದಾನೆ.’ ಅವನಿಗೆ ರಾಜಧನವನ್ನೇನೂ ಕೊಡಬೇಕಾಗಿಲ್ಲ ಎಂದೂ ಅವರು ನುಡಿದರು.
ಶಿವಮೊಗ್ಗ–ಮಂಗಳೂರು ವಿಭಾಗ ರಸ್ತೆ ಸಾರಿಗೆ ರಾಷ್ಟ್ರೀಕರಣ
ಬೆಂಗಳೂರು, ಅ. 15– ಶಿವಮೊಗ್ಗ– ಮಂಗಳೂರು ವಿಭಾಗದ ರಸ್ತೆ ಸಾರಿಗೆ ರಾಷ್ಟ್ರೀಕರಣವನ್ನು 1968ನೇ ಏಪ್ರಿಲ್ 1 ರಿಂದ ಕಾರ್ಯಗತಗೊಳಿಸಲು ರಾಜ್ಯ ರಸ್ತೆ ಸಾರಿಗೆ ಕಾರ್ಪೊರೇಶನ್ ನಿರ್ಧರಿಸಿದೆಯೆಂದು ಸಾರಿಗೆ ಸಚಿವ ಶ್ರೀ ಮಹಮದ್ ಆಲಿಯವರು ಇಂದು ಇಲ್ಲಿ ಪ್ರಕಟಿಸಿದರು.
ಸದ್ಯಕ್ಕೆ ರಾಜ್ಯದಲ್ಲಿ ಭೂಕಂದಾಯ ರದ್ದತಿ ಇಲ್ಲ: ಶ್ರೀ ಜತ್ತಿ
ಶಿವಮೊಗ್ಗ. ಅ. 15– ಪ್ರಸ್ತುತವಿರುವ ಭೂಕಂದಾಯ ಪದ್ಧತಿಯನ್ನು ಬದಲಾಯಿಸುವುದಕ್ಕೆ ಸೂಕ್ತವಾದ ಬೇರೆ ವ್ಯವಸ್ಥೆ ಇಲ್ಲದ್ದರಿಂದ ಆ ವ್ಯವಸ್ಥೆಯೇ ಮುಂದುವರಿಯುವುದು ಎಂದು ರಾಜ್ಯದ ಆಹಾರಮಂತ್ರಿ ಶ್ರೀ ಬಿ.ಡಿ. ಜತ್ತಿ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಆಕ್ಟ್ರಾಯ್ ತೆರಿಗೆ ರದ್ದಿಗೆ ಕೇಸ್ಕರ್ ಸಮಿತಿ ಶಿಫಾರಸು
ನವದೆಹಲಿ, ಅ. 15– ಆಕ್ಟ್ರಾಯಿಯಂತಹ ಸ್ಥಳೀಯ ಸುಂಕಗಳನ್ನು ಶೀಘ್ರವೇ ರದ್ದುಪಡಿಸಬೇಕೆಂದು ರಸ್ತೆ ತೆರಿಗೆ ತನಿಖಾ ಸಮಿತಿ ಶಿಫಾರಸು ಮಾಡಿದೆ. ರಸ್ತೆ ಸಾರಿಗೆಯು ಸುಸೂತ್ರವಾಗಿ ನಡೆಯುವುದಕ್ಕೆ ಇದು ಆತಂಕಕಾರಿ ಯಾಗಿರುವುದೇ ಕಾರಣವೆಂದೂ ತಿಳಿಸಿದೆ. ಆಕ್ಟ್ರಾಯಿ ಮತ್ತು ಇತರ ಗಡಿ ಕಟ್ಟೆಗಳ ಸುಂಕದ ಬಗ್ಗೆ ತನಿಖೆ ನಡೆಸಿದ ಬಿ.ವಿ. ಕೇಸ್ಕರ್ ನೇತೃತ್ವದ ಸಮಿತಿಯು ಕೇಂದ್ರ ರಸ್ತೆಸಾರಿಗೆ ಮತ್ತು ನೌಕಾಸಾರಿಗೆ ಖಾತೆಗೆ ಸಲ್ಲಿಸಿದ ತನ್ನ ಮಧ್ಯಂತರ ವರದಿಯಲ್ಲಿ ‘ಆಕ್ಟ್ರಾಯಿ ಹಾಗೂ ಇನ್ನಿತರ ಸುಂಕಗಳು ಲಂಚ ರುಸುವತ್ತುಗಳಿಗೆ ಎಡೆಕೊಡುತ್ತವೆ’ ಎಂದೂ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.