ನಾಗಪಟ್ಟಣಂ/ಚೆನ್ನೈ: ತಮಿಳುನಾಡು ಸಾರಿಗೆ ನಿಗಮಕ್ಕೆ ಸೇರಿದ 65 ವರ್ಷ ಹಳೆಯದಾದ ಕಟ್ಟಡದ ಒಂದು ಭಾಗ ಕುಸಿದು ಬಿದ್ದ ಪರಿಣಾಮವಾಗಿ ನಿಗಮದ ಎಂಟು ಸಿಬ್ಬಂದಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಮೂವರು ಸಿಬ್ಬಂದಿಯನ್ನು ಕರೈಕಲ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ‘ಮುಖ್ಯಮಂತ್ರಿಗಳ ತುರ್ತು ಪರಿಹಾರ ನಿಧಿ’ಯಿಂದ ಮೃತರ ಕುಟುಂಬದವರಿಗೆ ₹7.5 ಲಕ್ಷ ಪರಿಹಾರ ಮತ್ತು ಒಬ್ಬ ಸದಸ್ಯರಿಗೆ ಉದ್ಯೋಗದ ಭರವಸೆ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವವರಿಗೆ ₹1.5ಲಕ್ಷ, ಸಣ್ಣಪುಟ್ಟ ಗಾಯಗಳಾಗಿರುವವರಿಗೆ ₹50 ಸಾವಿರ ಪರಿಹಾರ ಘೋಷಿಸಿದ್ದಾರೆ.
‘ಮೃತರ ಕುಟುಂಬ ಒಬ್ಬ ಸದಸ್ಯನಿಗೆ, ಆತನ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಸಾರಿಗೆ ನಿಗಮದಲ್ಲಿಯೇ ಉದ್ಯೋಗ ನೀಡುವಂತೆ ನಿರ್ದೇಶನ ನೀಡಿದ್ದೇನೆ’ ಎಂದು ಪಳನಿಸ್ವಾಮಿ ಹೇಳಿದ್ದಾರೆ. ಕುಸಿತಕ್ಕೊಳಗಾದ ಕಟ್ಟಡದಲ್ಲಿ ಸಾರಿಗೆ ನಿಗಮದ ಸಿಬ್ಬಂದಿ ಕೆಲಸ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾಗಿದೆ.