ಲಕ್ಷ್ಮೇಶ್ವರ: ಸಮೀಪದ ರಾಮಗಿರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಬಸಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆಯಲ್ಲಿ ಹೂಳು ತುಂಬಿದೆ. ಈ ವರ್ಷ ಭಾರಿ ಮಳೆ ಆಗಿದ್ದರೂ ಕೆರೆ ಭರ್ತಿಯಾಗಿಲ್ಲ. ಕೆರೆಗೆ ನೀರು ಬರುವುದನ್ನು ಗ್ರಾಮಸ್ಥರೇ ತಡೆದಿದ್ದಾರೆ. ಸದ್ಯ ನೀರಿಲ್ಲದೆ ಕೆರೆ ಒಣಗಿದೆ.
‘ಅಂದಾಜು 8 ಎಕರೆ ಪ್ರದೇಶದಲ್ಲಿರುವ ಕೆರೆಯ ನೀರನ್ನೇ ಗ್ರಾಮಸ್ಥರು ನೆಚ್ಚಿಕೊಂಡಿದ್ದರು.ಆದರೆ, ಹೂಳು ತುಂಬಿರುವುದರಿಂದ ಕಡಿಮೆ ಪ್ರಮಾಣದಲ್ಲಿ ನೀರು
ಸಂಗ್ರಹ ಆಗುತ್ತದೆ. ಹೂಳನ್ನು ತೆಗೆಸಿದರೆ, ಕೆರೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಾಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥರು.
‘ಕಳೆದ ಎರಡು ದಶಕಗಳ ಹಿಂದೆ ಹೂಳು ತೆಗೆಸಲಾಗಿತ್ತು. ಹೂಳು ತೆಗೆಸಲು ಅನುದಾನ ನೀಡಬೇಕು ಎಂದು ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಬಸವಣ್ಣೆಪ್ಪ ದೊಡ್ಡಮನಿ ಹೇಳಿದರು.
‘ಶಾಸಕರು ಆದಷ್ಟು ಬೇಗ ಅನುದಾನ ಕೊಟ್ಟರೆ ನಮ್ಮೂರಿನ ಕೆರೆ ಹೂಳನ್ನು ತೆಗೆಸಲು ಸಾಧ್ಯವಾಗುತ್ತದೆ’ ಎಂದು ಹೇಳುತ್ತಾರೆ ಗ್ರಾಮಸ್ಥ ಈರಯ್ಯ ತಾಮ್ರಗುಂಡಿಮಠ.