ಮೈಸೂರು: ವಿಕೋಪ ಪರಿಹಾರ ಹಾಗೂ ವಿವಿಧ ಕಾಮಗಾರಿ ಸಂಬಂಧ ಫಲಾನುಭವಿಗಳಿಗೆ ಜಿಲ್ಲಾಡಳಿತ ಹಳೆ ಚೆಕ್ ವಿತರಿಸುತ್ತಿದ್ದು , ಅದನ್ನು ಪಡೆಯಲು ಬ್ಯಾಂಕುಗಳು ಹಿಂದೇಟು ಹಾಕುತ್ತಿವೆ. ಭಾರಿ ಮಳೆಯಿಂದಾಗಿ ಉಂಟಾಗಿದ್ದ ಹಾನಿಗೆ ಪರಿಹಾರವಾಗಿ ಕನಕಗಿರಿ ನಿವಾಸಿಗಳಿಗೆ ಜಿಲ್ಲಾಡಳಿತ ಪರಿಹಾರ ವಿತರಿಸಿದೆ.
ಆ ಹಣವನ್ನು ಚೆಕ್ ಮೂಲಕ ನೀಡಿದೆ. ಫಲಾನುಭವಿಗಳಿಗೆ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಚೆಕ್ನಲ್ಲಿ ಮೈಸೂರು ತಾಲ್ಲೂಕಿನ ತಹಶೀಲ್ದಾರ್ ಸಹಿ ಇದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್ಬಿಐ) ವಿಲೀನಗೊಂಡಿದೆ.
ಹಳೆ ಚೆಕ್ ಹಿಂತಿರುಗಿಸಿ ಹೊಸ ಚೆಕ್ ಪಡೆಯಲು ಸೆ. 30 ಕಡೆಯ ದಿನವಾಗಿತ್ತು. ಆದರೆ, ಆ ರೀತಿ ಮಾಡದ ಜಿಲ್ಲಾಡಳಿತ ಆ ಚೆಕ್ಗಳನ್ನು ಫಲಾನುಭವಿಗಳಿಗೆ ನೀಡಿ ಎಡವಟ್ಟು ಮಾಡಿದೆ. ಹಣ ಪಡೆಯುವ ಉದ್ದೇಶದಿಂದ ಬ್ಯಾಂಕಿಗೆ ಹೋದವರು ಪರದಾಡುತ್ತಿದ್ದ ದೃಶ್ಯ ಸೋಮವಾರ ಕಂಡು ಬಂತು.
‘ಹೊಸ ಚೆಕ್ ಪಡೆಯುವಂತೆ ಎಸ್ಬಿಐನಿಂದಲೇ ಹಲವು ಬಾರಿ ಸೂಚನೆ ಹೊರಡಿಸಲಾಗಿದೆ. ಗ್ರಾಹಕರ ಮೊಬೈಲ್ಗೂ ಸಂದೇಶ ಕಳುಹಿಸಲಾಗಿದೆ. ಚೆಕ್ ಬದಲಾಯಿಸಲು ಈಗಲೂ ಅವಕಾಶವಿದೆ’ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಕೆ.ಎನ್.ಶಿವಲಿಂಗಯ್ಯ ತಿಳಿಸಿದರು.
‘ಫಲಾನುಭವಿಗಳು ಎಸ್ಬಿಐನಲ್ಲಿ ಖಾತೆ ಹೊಂದಿದ್ದರೆ ಹಣ ಸಿಗುವ ಸಾಧ್ಯತೆಗಳು ಇವೆ. ಆದರೆ, ಬೇರೆ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರೆ ಕಷ್ಟವಾಗಲಿದೆ. ಹೀಗಾಗಿ, ಹಳೆ ಚೆಕ್ ಹಿಂತಿರುಗಿಸಿ ಹೊಸ ಚೆಕ್ ಪಡೆಯಬೇಕು’ ಎಂದರು.
ನಗರದ ಗೋಡೆಗಳ ಮೇಲೆ ಚಿತ್ರ ಬಿಡಿಸಿದ ಕಲಾವಿದರೂ ಇದೇ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಅವರಿಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಚೆಕ್ ವಿತರಿಸಲಾಗಿದೆ. ‘ಸರ್ಕಾರವೇ ಹಳೆ ಚೆಕ್ ವಿತರಿಸಿದರೆ ಹೇಗೆ? ಇನ್ನು ಜನಸಾಮಾನ್ಯರ ಪಾಡೇನು? ಈ ಎಡವಟ್ಟವನ್ನು ಬೇಗನೇ ಸರಿಪಡಿಸಿ ಹೊಸ ಚೆಕ್ ವಿತರಿಸಬೇಕು’ ಎಂದು ಕಲಾವಿದರೊಬ್ಬರು ಆಗ್ರಹಿಸಿದರು.