ಅಂಕೋಲಾ: ತಾಲ್ಲೂಕಿನ ಅಗಸೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಕ್ಕಿಗದ್ದೆಯ ಗ್ರಾಮದಲ್ಲಿ ರಾತ್ರಿ ವೇಳೆ ಮನೆಯೊಳಗೆ ನುಗ್ಗಿದ ಚಿರತೆಯು ಯುವಕನೊಬ್ಬನ ಮೇಲೆ ದಾಳಿ ನಡೆಸಿದ್ದು, ಆತನ ತಲೆಗೆ ಪರಚಿದ ಗಾಯಗಳಾಗಿವೆ.
ಮನೆಯಲ್ಲಿ ಮಲಗಿದ್ದ ಕುಮಾರ ಶಿವು ಗೌಡನ ತಲೆಬುಡದಲ್ಲೇ ಸಾಕು ನಾಯಿಯೂ ಮಲಗಿತ್ತು. ಚಿರತೆಯು ನಾಯಿಯನ್ನು ಹೊತ್ತೊಯ್ಯುವಾಗ ಕುಮಾರ ತಲೆಗೆ ಪರಿಚಿದ ಗಾಯವಾಗಿದೆ. ಪ್ರಾಣಾಪಾಯದಿಂದ ಪಾರಾಗಿರುವ ಆತ ಅಂಕೋಲಾ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.
ಮಾಸ್ತಿಕಟ್ಟಾ ವಲಯ ಅರಣ್ಯಾಧಿಕಾರಿ ವಿ.ಟಿ.ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಸಂಜೀವ ನಾಯ್ಕ, ಅರಣ್ಯ ರಕ್ಷಕ ರಾಹುಲ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಅಗಸೂರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಯಶ್ವಂತ ತಿಮ್ಮಾಗೌಡ ಉಪಸ್ಥಿತರಿದ್ದರು.