ಅಕ್ಕೂರು (ಚನ್ನಪಟ್ಟಣ): ಇಲ್ಲಿಗೆ ಸಮೀಪದ ಬಾಣಗಹಳ್ಳಿ ಗ್ರಾಮದ ಕೆರೆ ಮಳೆ ಹಾಗೂ ಏತ ನೀರಾವರಿ ಯೋಜನೆ ವತಿಯಿಂದ ಭರ್ತಿಯಾಗಿ ಕೋಡಿ ಹರಿದ ಹಿನ್ನೆಲೆಯಲ್ಲಿ ಕೆರೆಗೆ ಶಾಸಕ ಸಿ.ಪಿ.ಯೋಗೇಶ್ವರ್ ಶುಕ್ರವಾರ ಬಾಗಿನ ಸಲ್ಲಿಸಿದರು.
ಗ್ರಾಮೀಣ ಪ್ರದೇಶದ ಕೆರೆಕಟ್ಟೆಗಳು ತುಂಬಿದರೆ ಗ್ರಾಮದಲ್ಲಿ ಸಂಭ್ರಮದ ಕಾರ್ಯಕ್ರಮಗಳು ಆರಂಭವಾಗುತ್ತವೆ. ಜನತೆ ಸಂತಸದಿಂದ ಬಾಳಲು ಅನುಕೂಲವಾಗುತ್ತದೆ. ಅಲ್ಲೆಡೆ ನೀರು ಕಾಣಿಸುವುದರಿಂದ ಗ್ರಾಮಗಳಲ್ಲಿ ಸಮೃದ್ಧಿ ನೆಲಸುತ್ತದೆ ಎಂದರು.'
ಕಣ್ವ ಏತ ನೀರಾವರಿ ಯೋಜನೆಯಡಿಯಲ್ಲಿ ಈ ಕೆರೆಯನ್ನು ಒಮ್ಮೆ ತುಂಬಿಸಲಾಗಿತ್ತು. ಇದೀಗ ಎರಡನೇ ಬಾರಿ ಕೆರೆಯು ಮಳೆ ನೀರು ಹಾಗೂ ಏತ ನೀರಾವರಿ ಯೋಜನೆಯಿಂದ ಹರಿಸಲಾದ ನೀರಿನಿಂದ ತುಂಬಿದೆ.
ಈ ಭಾಗದಲ್ಲಿ ಅಂತರ್ಜಲ ಹೆಚ್ಚಿ ಗ್ರಾಮದ ನೂರಾರು ಪಂಪ್ ಸೆಟ್ ಗಳು ಪುನಶ್ಚೇತನಗೊಂಡಿವೆ. ಇದರಿಂದ ರೈತರು ಉತ್ತಮ ಬೆಳೆ ಬೆಳೆದು ಅಭಿವೃದ್ಧಿ ಸಾಧಿಸಲು ಅನುಕೂಲವಾಗುತ್ತದೆ ಎಂದರು.
ತಿಗಳ ಸಮುದಾಯದ ಜ್ಞಾನಾನಂದಪುರಿ ಮಹಾಸ್ವಾಮಿ ಮಾತನಾಡಿ, ಈ ಬಾರಿ ಉತ್ತಮ ಮಳೆಯಾಗಿದೆ. ಇದರ ಜೊತೆಗೆ ನೀರಾವರಿ ಯೋಜನೆಯಡಿಯಲ್ಲಿಯೂ ತಾಲ್ಲೂಕಿನಲ್ಲಿ ನೀರು ಹರಿದಿದೆ. ಇದರಿಮದ ಸಮೃದ್ಧಿ ನೆಲೆಸಿದಂತಾಗಿದೆ.
ಜನತೆ ಸಂಗ್ರಹವಾಗಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವೃಥಾ ಖರ್ಚು ಮಾಡಿ ನೀರಿಲ್ಲದಾಗ ಪರಿತಪಿಸಬಾರದು ಎಂದು ಕಿವಿಮಾತು ಹೇಳಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹರೂರು ರಾಜಣ್ಣ, ಸದಸ್ಯರಾದ ಸುನೀತಾ ಸಿದ್ದಪ್ಪ, ನಾಗಮ್ಮ ರಾಜು, ಮುಖಂಡ ಕೃಷ್ಣಪ್ಪ ಭಾಗವಹಿಸಿದ್ದರು.