ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೇ ಪಟಗಳಾದಾಗ...

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ಕಪಕ್ಕದ ವೇದಿಕೆಗಳಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿದ್ದರೆ, ಆ ವೇದಿಕೆಗಳ ನಡುವಿನ ಪುಟಾಣಿ ಅಂಗಳದಲ್ಲಿ ಚಿಣ್ಣರ ಕಲವರ ತುಂಬಿಕೊಂಡಿತ್ತು. ಅವರೆಲ್ಲನ್ನು ಅಲ್ಲಿ ಒಟ್ಟುಗೂಡಿಸಿದ್ದುದು ಗಾಳಿಪಟದ ಸೂತ್ರ!

ಲೇಖಕಿ ಲೀಲಾ ಬ್ರೂಮ್‍ ಅವರು ಮಕ್ಕಳಿಗೆ ಗಾಳಿಪಟ ಮಾಡುವ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಹೆಸರಿಗಷ್ಟೇ ಅದು ಕಮ್ಮಟ. ನಿಂತಲ್ಲಿ ನಿಲ್ಲದ, ಕೂತಲ್ಲಿ ಕೂರದ ಮಕ್ಕಳು ತಾವೇ ಪಟಗಳಾದಂತಿದ್ದರು. ಗಾಳಿಪಟಕ್ಕೆ ಕಾಗದ ಕತ್ತರಿಸುವ, ಅದಕ್ಕೆ ಕಡ್ಡಿಗಳನ್ನು ಹಾಗೂ ಬಾಲಂಗೋಸಿಯನ್ನು ಅಂಟಿಸುವ ಸಂಭ್ರಮ ಅವರದಾಗಿತ್ತು.

ಗಾಳಿಪಟದ ಮೇಲೆ ವಿವಿಧ ಆಕೃತಿಗಳನ್ನು ಬರೆಯುವ ಮೂಲಕ ಪಟದ ಚೆಲುವನ್ನು ಹೆಚ್ಚಿಸುವ ಸಾಧ್ಯತೆಗಳನ್ನು ಲೀಲಾ ಮಕ್ಕಳಿಗೆ ಹೇಳಿಕೊಟ್ಟರು.

ಗೌರಿ ಲಂಕೇಶ್‍ಗೆ ಕಾವ್ಯ ನಮನ

ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಕಾರ್ಯಕ್ರಮದ ಆರಂಭದಲ್ಲಿ ವಿವಿಧ ಕವಿಗಳ ಕವಿತೆಗಳ ಮೂಲಕ ನುಡಿ ನಮನ ಸಲ್ಲಿಸಲಾಯಿತು. ಲೇಖಕರಾದ ನಿಮಿ ರವೀಂದ್ರನ್ ಮತ್ತು ಪದ್ಮಾವತಿ ರಾವ್ ಅವರು ಗೌರಿ ಲಂಕೇಶ್ ಹತ್ಯೆಯ ಬಳಿಕ ಬೇರೆ ಬೇರೆ ಕವಿಗಳು ಗೌರಿ ಬಗ್ಗೆ ರಚಿಸಿರುವ ಕವಿತೆಗಳನ್ನು ವಾಚಿಸಿದರು.

ಸಲೀಲ್ ಚತುರ್ವೇದಿ ಅವರ ‘ರಕ್ತ್ ರಕ್ತ್ ರಕ್ತ್', ರಮೇಶ್ ಪರಾಶರ್ ಅವರ ‘ಗೌರಿ ಲಂಕೇಶ್', ಕವಿತಾ ಲಂಕೇಶ್ ಅವರ ‘ಅಕ್ಕ' ಕವಿತೆಯನ್ನು ಪದ್ಮಾವತಿ ರಾವ್ ವಾಚಿಸಿದರು.

ಬಾಗಿಲನು ತೆರೆದು...

ಸಾಹಿತ್ಯ ಉತ್ಸವ ನಡೆಯುತ್ತಿದ್ದ ವೇದಿಕೆಗಳ ನಡುವೆ ಎದ್ದುನಿಂತಿದ್ದ ಗುಡಿಸಲಿನ ರೀತಿಯ ಪುಟ್ಟ ಕಲಾಕೃತಿಯೊಂದು ಸಹೃದಯರ ಆಕರ್ಷಣೆಯ ಕೇಂದ್ರವಾಗಿತ್ತು. ಕಥೆಗಾರ ಜಯಂತ ಕಾಯ್ಕಿಣಿ ಅವರ ಬರಹಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಬಾಗಿಲಿನ ರೂಪಕವನ್ನು ಬಳಸಿಕೊಂಡು ರೂಪುಗೊಂಡಿದ್ದ ಮಲ್ಟಿಮೀಡಿಯಾ ಇನ್‍ಸ್ಟಾಲೇಷನ್‍ ಅದು. ಈ ಕಲಾಕೃತಿಯ ರೂವಾರಿ ಕವಯಿತ್ರಿ ಪ್ರತಿಭಾ ನಂದಕುಮಾರ್‍.

ಮುಖ್ಯ ಬಾಗಿಲನ್ನು ದಾಟಿಕೊಂಡು ಒಳಹೋದರೆ ಅಲ್ಲಿ ಎರಡು ಬಾಗಿಲುಗಳು! ಎದುರಿಗಿದ್ದ ಟೀವಿ ಪರದೆಯ ಮೇಲೆ ತಮ್ಮ ಬರಹಗಳನ್ನು ವಾಚಿಸುವ ಜಯಂತ ಕಾಯ್ಕಿಣಿ. ಕಥನ-ಕವನಗಳಲ್ಲಿ ಬಳಕೆಯಾದ ಬಾಗಿಲಿನ ರೂಪಕಚಿತ್ರಗಳನ್ನು ಜಯಂತ್‍ ಸೊಗಸಾಗಿ ಓದುವ ಹನ್ನೆರಡು ನಿಮಿಷಗಳ ದೃಶ್ಯಗಳು ನೋಡುಗರನ್ನು ಸೆಳೆಯುವಂತಿದ್ದವು. ಕೆಲವರು ನಿಂತುಕೊಂಡು, ಮತ್ತೆ ಕೆಲವರು ಬಾಗಿಲಿನ ಮೆಟ್ಟಿಲುಗಳ ಮೇಲೆ ಕುಳಿತುಕೊಂಡು ಜಯಂತ್‍ ದನಿಗೆ ಕಿವಿಯಾಗಿದ್ದರು.

ಯುವಸಂಭ್ರಮದ ಉತ್ಸವ

ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ಯುವಜನರ ಸಂಖ್ಯೆ ಗಣನೀಯವಾಗಿತ್ತು. ಹೊಸ ತಲೆಮಾರಿನ ಭಾಗವಹಿಸುವಿಕೆ ಕನ್ನಡದ ಲೇಖಕರ ಕುತೂಹಲಕ್ಕೆ ಕಾರಣವಾಗಿತ್ತು.

ಉತ್ಸವದಲ್ಲಿನ ಯೌವನವನ್ನು ಆವಾಹಿಸಿಕೊಳ್ಳುವಂತೆ ವೇದಿಕೆಯಿಂದ ವೇದಿಕೆಗೆ ಓಡಾಡಿದ ಗಿರೀಶ ಕಾರ್ನಾಡರು ಹೆಚ್ಚಿನ ಸಂಖ್ಯೆಯ ತರುಣ ತರುಣಿಯರನ್ನು ನೋಡಿ ಉಲ್ಲಸಿತರಾಗಿದ್ದರು. 'ಇವರಲ್ಲಿ ಎಷ್ಟುಮಂದಿ ಚರ್ಚೆಗಳನ್ನು ಗಂಭೀರವಾಗಿ ಕೇಳಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಇಷ್ಟೊಂದು ಮಂದಿ ಸಾಹಿತ್ಯ-ಸಾಂಸ್ಕೃತಿಕ ಚರ್ಚೆಗಳಲ್ಲಿ ಭಾಗವಹಿಸುವುದೇ ಒಂದು ವಿಶೇಷ ಸಂಗತಿ' ಎನ್ನುವುದು ಅವರ ಅನಿಸಿಕೆ.

ಯುವಪೀಳಿಗೆಯ ಭಾಗವಹಿಸುವಿಕೆಯನ್ನು ಕಾದಂಬರಿಕಾರ ಬೊಳುವಾರು ಮಹಮ್ಮದ್ ಕುಂಞಿ ಕುತೂಹಲದಿಂದ ಗಮನಿಸುತ್ತಿದ್ದರು. ಕನ್ನಡದ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಇವರನ್ನೆಲ್ಲ ಕರೆತರುವುದು ಹೇಗೆ ಎನ್ನುವ ಪ್ರಶ್ನೆಗೆ ಅವರು ಉತ್ತರ ಹುಡುಕುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT