ಮೈಸೂರು: ದಕ್ಷಿಣ ಕನ್ನಡ ಜಿಲ್ಲಾ ತಂಡದವರು ಇಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.
ಸಂತ ಫಿಲೋಮಿನಾ ಪಿಯು ಕಾಲೇಜಿನಲ್ಲಿ ಶನಿವಾರ ನಡೆದ ಬಾಲಕರ ಫೈನಲ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ತಂಡದವರು 25–13, 25–6ರಲ್ಲಿ ಉಡುಪಿ ಜಿಲ್ಲಾ ತಂಡವನ್ನು ಮಣಿಸಿದರು.
ವಿಜಯಿ ತಂಡದ ಸೌರವ್, ಪವನ್ ಕುಮಾರ್ ಉತ್ತಮ ಪ್ರದರ್ಶನ ತೋರಿದರು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ 25–16, 27–25ರಲ್ಲಿ ಬೆಂಗಳೂರು ದಕ್ಷಿಣ ಎದುರೂ, ಉಡುಪಿ ಜಿಲ್ಲೆ ತಂಡ 16–25, 25–16, 15–12ರಲ್ಲಿ ಮೈಸೂರು ಜಿಲ್ಲಾ ತಂಡದ ವಿರುದ್ಧವೂ ಗೆಲುವು ಸಾಧಿಸಿದವು.
ಬಾಲಕಿಯರ ಫೈನಲ್ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡದವರು 25–21, 25–11ರಲ್ಲಿ ಬೆಂಗಳೂರು ಉತ್ತರ ತಂಡವನ್ನು ಪರಾಭವಗೊಳಿಸಿದರು.
ಸೆಮಿಫೈನಲ್ ಪೈಪೋಟಿಯಲ್ಲಿ ಬೆಂಗಳೂರು ಉತ್ತರ ತಂಡದವರು 25–14, 25–22ರಲ್ಲಿ ಕೊಪ್ಪಳ ಎದುರೂ, ದಕ್ಷಿಣ ಕನ್ನಡ ತಂಡದವರು 25–14, 26–24ರಲ್ಲಿ ಬೆಳಗಾವಿ ಮೇಲೂ ಗೆದ್ದರು.