ನವದೆಹಲಿ: ಉರ್ದು ಲೇಖಕ, ವಿಮರ್ಶಕ ಹಾಗೂ ಭಾಷಾತಜ್ಞ ಅಬ್ದುಲ್ ಕಾವೀ ದೇಸನಾವೀ ಅವರ 87ನೇ ಹುಟ್ಟುಹಬ್ಬದಂದು ವಿಶೇಷ ಡೂಡಲ್ ರೂಪಿಸುವ ಮೂಲಕ ಗೂಗಲ್ ಗೌರವ ಸಲ್ಲಿಸಿದೆ.
ಬಿಹಾರದ ನಳಂದ ಜಿಲ್ಲೆಯ ದೇಸನಾ ಗ್ರಾಮದಲ್ಲಿ ಜನಿಸಿದ್ದ ದೇಸನಾವೀ ಅವರು ಉರ್ದು ಸಾಹಿತ್ಯ ಬೆಳವಣಿಗೆಯಲ್ಲಿ ಸಾಕಷ್ಟು ಪ್ರಭಾವ ಬೀರಿದ್ದರು ಎಂದು ಗೂಗಲ್ ತನ್ನ ಪ್ರಕಟಣೆಯಲ್ಲಿ ಹೇಳಿದೆ. 2011ರ ಜುಲೈ7ರಂದು ಅವರು ಭೋಪಾಲದಲ್ಲಿ ನಿಧನರಾದರು.
ಭೋಪಾಲದ ಸೈಫಿಯಾ ಕಾಲೇಜಿನಲ್ಲಿ ಪ್ರೊಫೆಸರ್ ಹಾಗೂ ಉರ್ದು ವಿಭಾಗದ ಮುಖ್ಯಸ್ಥರಾಗಿದ್ದ ಅವರು, ಕಾವ್ಯ, ಕಾದಂಬರಿ, ಆತ್ಮಕಥೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ.
ದೇಶದ ಮೊದಲ ಶಿಕ್ಷಣ ಸಚಿವ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮೌಲಾನಾ ಆಜಾದ್ ಅವರ ಜೀವನ ಕುರಿತಂತೆ ರಚಿಸಿರುವ ‘ಹಯಾತ್ –ಎ–ಅಬುಲ್ ಕಲಾಂ ಆಜಾದ್‘ ಅವರ ಪ್ರಮುಖ ಕೃತಿಗಳಲ್ಲಿ ಒಂದಾಗಿದೆ.