ಬೆಂಗಳೂರು: ‘ಮತಾಂತರ ಪ್ರಕೃತಿ ಧರ್ಮ, ಇದರಲ್ಲಿ ಯಾವುದೇ ದ್ರೋಹವಿಲ್ಲ’ ಎಂದು ಸಂಸ್ಕೃತಿಕ ಚಿಂತಕ ಜಿ.ಕೆ ಗೋವಿಂದರಾವ್ ಹೇಳಿದರು.
ನಗರದಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ‘ಡಾ.ಬಿ.ಆರ್.ಅಂಬೇಡ್ಕರ್ ಧಮ್ಮ ದೀಕ್ಷ ಪರಿವರ್ತನಾದಿನ’ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೌರ್ಜನ್ಯ ನಡೆಸುವ ಉದ್ದೇಶದಿಂದಲೇ ಹುಟ್ಟಿದ ಜಾತಿಯಲ್ಲಿಯೇ ಸಾಯಬೇಕು ಎನ್ನುವುದು’ ಎಂದರು.
‘ನೆನ್ನೆಯ ಆಲೋಚನೆ, ಇಂದಿನ ಆಲೋಚನೆಗಳ ನಡುವೆ ಬದಲಾವಣೆ ಬರಬೇಕು ಅದೇ ಶಕ್ತಿ, ಅದೇ ಮತಾಂತರ’ ಎಂದು ಅಭಿಪ್ರಾಯಪಟ್ಟರು.
‘ನನಗೆ ಖಾವಿಯ ಬಗ್ಗೆ ಅನುಮಾನವಿದೆ, ಎಲ್ಲಾ ಮಠಗಳು ಸರ್ಕಾರದ ವಿರುದ್ಧವಿದೆ, ಸಮಾನತೆಯ ವಿರುದ್ಧವಿದೆ. ನಮಗೆ ಸಾವಿರ ವರ್ಷದ ಇತಿಹಾಸ ಬೇಡ, ಮುಂದಿನ ಸಾವಿರ ವರ್ಷದ ಭವಿಷ್ಯ ರೂಪಿಸಿಕೊಳ್ಳುವ ಚಿಂತನೆಯ ಅಗತ್ಯವಿದೆ’ ಎಂದು ಸಲಹೆ ನೀಡಿದರು.
‘ಪ್ರಜಾಪ್ರಭುತ್ವ ಧರ್ಮ, ಎಕೆಂದರೆ ಅದು ಕಾಲ ಕಾಲಕ್ಕೆ ಬದಲಾಗುತ್ತದೆ. ಧರ್ಮದಲ್ಲಿ ಬದಲಾಗಲು ಸಾಧ್ಯವಿಲ್ಲ’ ಎಂದರು.
ಲೇಖಕ ಸಿ.ಎಚ್.ರಾಜಶೇಖರ್ ‘ಅಂಬೇಡ್ಕರ್ ಮಂತ್ರಿಸ್ಥಾನವನ್ನು ತ್ಯಜಿಸಿದ್ದು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ, ಜಾತಿಗಾಗಿ ಅಲ್ಲ. ಕೋಮುವಾದಿಗಳಿಗೆ ಸಕಲವೂ ಲಭ್ಯವಿದೆ. ಆದರೆ, ಅವರು ಮಡಿರುವುದೇನು’ ಎಂದು ಪ್ರಶ್ನೆಮಾಡಿದರು.
ಸಮಾಜವಾದಿ ಚಿಂತಕ ರುದ್ರಪ್ಪ ಹನಗವಾಡಿ ’ಅಂಬೇಡ್ಕರ್ ನೀಡಿರುವ ಕೊಡುಗೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ, ಶೇ 50 ಮೀಸಲಾತಿಯನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಆಲೋಚಿಸಬೇಕು. ಬೇರೆಯವರನ್ನು ದೋಷಿಸುವ ಅಗತ್ಯವಿಲ್ಲ ಎಂದರು.