ಉಡುಪಿ: ಪಲಿಮಾರು ಮಠದ ಪರ್ಯಾಯದ ಪೂರ್ವಭಾವಿ ಕೊನೆಯ ಭತ್ತ ಮುಹೂರ್ತ ಶ್ರೀ ಕೃಷ್ಣ ಮಠದ ಬಡಗು ಮಾಳಿಗೆ ಗುರುವಾರ ನೆರವೇರಿತು. ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿಗಳು ಹಾಗೂ ಮಠದ ಪುರೋಹಿತ ಹೆರ್ಗ ವೇದವ್ಯಾಸ ಭಟ್, ಅವರ ನೇತೃತ್ವದಲ್ಲಿ ಬೆಳಿಗ್ಗೆ 5ಗಂಟೆಗೆ ನವಗ್ರಹ ಆರಾಧನೆ ನಡೆಸಲಾಯಿತು. ನಂತರ ಮಠದ ಇಷ್ಟ ದೇವರಿಗೆ ಪೂಜೆ ಸಲ್ಲಿಸಲಾಯಿತು. ಆ ನಂತರ ಮೆರವಣಿಗೆಯಲ್ಲಿ ಸಾಗಿ ಅನಂತೇಶ್ವರ ಹಾಗೂ ಚಂದ್ರೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.
ಭತ್ತದ 5 ಮುಡಿಯಲ್ಲಿ ಒಂದು ಚಿಕ್ಕ ಮುಡಿಯನ್ನು ಚಿನ್ನ ಪಲ್ಲಕ್ಕಿಯಲ್ಲಿಟ್ಟು ರಥ ಬೀದಿಯಲ್ಲಿ ಮೆರವಣಿಗೆ ಮೂಲಕ ಸಾಗಿ ಬಡಗು ಮಾಳಿಗೆ ತೆರಳಿ ಭತ್ತದ ಮುಡಿಗಳನ್ನಿಟ್ಟು ಪೂಜಿಸಲಾಯಿತು. ಅಷ್ಟ ಮಠಗಳಿಗೆ ಫಲ ತಾಂಬೂಲ ನೀಡುವ ಮೂಲಕ ಪರ್ಯಾಯಕ್ಕೆ ಸಹಕಾರ ನೀಡುವಂತೆ ಕೋರಲಾಯಿತು. ದೀಪಾವಳಿ ಕಟಾವಿನ ಬಳಿಕ ಸಿಗುವ ಹೊಸ ಭತ್ತವನ್ನು ಸಂಗ್ರಹಿಸಿ ಇಡಲಾಗುತ್ತದೆ. ಎರಡು ವರ್ಷಗಳ ಕಾಲಾವಧಿಯಲ್ಲಿ ಅಕ್ಕಿ ಸಂಗ್ರಹಿಸುವುದು ಕಷ್ಟ ಸಾಧ್ಯವಾದರಿಂದ ಭತ್ತದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಇದನ್ನು ಪರ್ಯಾಯದ ಕೊನೆಯಲ್ಲಿ ಅಕ್ಕಿ ಮಾಡಿ ಭಕ್ತರಿಗೆ ಶ್ರೀ ಕೃಷ್ಣ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.
ಕಟ್ಟಿಗೆ ರಥಕ್ಕೆ ಕಲಶ ಪ್ರತಿಷ್ಠಾಪನೆ: ಪರ್ಯಾಯದ ಪೂರ್ವಭಾವಿಯಾಗಿ ಎರಡು ವರ್ಷದ ಅನ್ನ ಸಂತರ್ಪಣೆಗೆ ಅಗತ್ಯವಿರುವ ಕಟ್ಟಿಗೆ ಸಂಗ್ರಹಿಸುವ ಕಟ್ಟಿಗೆ ಮೂಹೂರ್ತಕ್ಕೆ ಅಗಸ್ಟ್ 27 ರಂದು ಚಾಲನೆ ನೀಡಲಾಗಿತ್ತು. ಎರಡು ವರ್ಷಕ್ಕೆ ಅಗತ್ಯ ಇರುವ ಕಟ್ಟಿಗೆ ಸಂಗ್ರಹಿಸಿ ಕಟ್ಟಿಗೆ ರಥವನ್ನು ನಿರ್ಮಿಸಲಾಗುತ್ತದೆ. ಪರ್ಯಾಯದ ಕೊನೆ ಮುಹೂರ್ತವಾದ ಭತ್ತ ಮುಹೂರ್ತದಂದು ಕಟ್ಟಿಗೆ ರಥಕ್ಕೆ ಶಶಿಧರ್ ಮಸ್ತ್ರಿ ಕಲಶವನ್ನು ಇಡುವ ಮೂಲಕ ಕಲಶ ಮೂಹೂರ್ತ ನೇರವೇರಿತು.
ಚಪ್ಪರ ಮುಹೂರ್ತ: ಭತ್ತ ಮುಹೂರ್ತದ ನಂತರ ಮುಂದಿನ ಕಾರ್ಯಕ್ರಮವೇ ಪರ್ಯಾಯ ಆಗಿರುವು ದರಿಂದ ಅದರ ಪೂರ್ವಭಾವಿಯಾಗಿ ಶ್ರೀ ಕೃಷ್ಣ ಮಠದ ರಾಜಾಂಗಣದ ಪಾರ್ಕಿಂಗ್ ಏರಿಯಾದಲ್ಲಿ ಮಠದ ದಿವಾನ ದಿವಾನರಾದ ವೇದವ್ಯಾಸ ತಂತ್ರಿಗಳು ಹಾಗೂ ಮಠದ ಪುರೋಹಿತ ಹೆರ್ಗ ವೇದವ್ಯಾಸ ಭಟ್ ನೇತೃತ್ವದಲ್ಲಿ ಚಪ್ಪರ ಮುಹೂರ್ತ ನೇರವೇರಿಸಲಾಯಿತು. ಪರ್ಯಾಯ ಉತ್ಸವಕ್ಕೆ ಸಂಬಂಧ ಪಟ್ಟಿದ್ದು. ಇದು ಪರ್ಯಾಯ ಪ್ರಕ್ರಿಯೆಗೆ ಒಂದು ಚಾಲನೆ ಸಿಕ್ಕಿದೆ.
ಜನವರಿ 3 ರಂದು ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ಪುರ ಪ್ರವೇಶ ಮಾಡಲಿದ್ದಾರೆ. ಸ್ವಾಮೀಜಿ ಅವರಿಗೆ ಅದ್ಧೂರಿ ಸ್ವಾಗತ ನೀಡಲು ಸಿದ್ಧತೆಗಳು ಭರದಿಂದ ನಡೆದಿವೆ ಎಂದು ಮಠದ ದಿವಾನರಾದ ವೇದವ್ಯಾಸ ತಂತ್ರಿ ತಿಳಿಸಿದರು.
ಪರ್ಯಾಯ ಪೇಜಾವರ ಮಠದ ದಿವಾನ ರಘುರಾಮ ಆಚಾರ್ಯ,ಅದಮಾರು ಮಠದ ದಿವಾನ ವೆಂಕಟರಮಣ ಮುಚ್ಚಿನ್ತಯಾ, ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣ ಅಸ್ರಣ್ಣ, ಕಮಲಾದೇವಿ ಅಸ್ರಣ್ಣ , ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ, ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟು ಲಕ್ಷ್ಮೀನಾರಾಯಣ ರಾವ್, ಪದ್ಮನಾಭ ಭಟ್, ಖಜಾಂಚಿ ರಮೇಶ್ ರಾವ್ ಬೀಡು, ಜೊತೆ ಕಾರ್ಯದರ್ಶಿಗಳಾದ ವಿಷ್ಣುಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು.
ಮೂಹೂರ್ತ ಹಿಂದಿನ ಮಹತ್ವ
ಪರ್ಯಾಯದ ಪೂರ್ವಭಾವಿಯಾಗಿ ನಡೆಯುವ ಬಾಳೆ, ಅಕ್ಕಿ, ಕಟ್ಟಿಗೆ, ಹಾಗೂ ಭತ್ತದ ಮೂಹೂರ್ತಕ್ಕೆ ಅದರದೇ ಆದ ವಿಶೇಷತೆ ಇದೆ. ಅನ್ನ ದಾನಕ್ಕೆ ಅಗತ್ಯವಿರು ಬಾಳೆ ಎಲೆಗೆ ಪರ್ಯಾಯ ಒಂದು ವರ್ಷದ ಹಿಂದೆ ಬಾಳೆ ಮುಹೂರ್ತಕ್ಕೆ ಚಾಲನೆ ನೀಡಲಾಗುತ್ತದೆ ಎಂದುಪಲಿಮಾರು ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ಹೇಳಿದರು.
ಶ್ರೀ ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಶ್ರೀ ಕೃಷ್ಣ ಪ್ರಸಾದ್ ನೀಡಲು ಅಕ್ಕಿಯನ್ನ ಸಂಗ್ರಹಿಸಲಾಗುತ್ತದೆ ಈ ನಿಟ್ಟಿನಲ್ಲಿ ಅಕ್ಕಿ ಮುಹೂರ್ತ, ಆಹಾರ ಬೇಯಿಸಲು ಅಗತ್ಯವಿರುವ ಕಟ್ಟಿಗೆ ಮುಹೂರ್ತ ಹಾಗೂ ಎರಡು ವರ್ಷದ ಅವಧಿಯಲ್ಲಿ ಅಕ್ಕಿ ಸಂಗ್ರಹಿಸು ಗೋದಾಮಿನಲ್ಲಿ ಇಡುವುದು ಕಷ್ಟ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹಿಂದಿನಿಂದಲ್ಲೂ ಅಕ್ಕಿ ಪರ್ಯಾಯವಾಗಿ ಭತ್ತವನ್ನು ಸಂಗ್ರಹಿಸಲಾಗುತ್ತದೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.