ಶ್ರೀನಗರ: ಬಂಡಿಪೊರಾ ಮತ್ತು ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಸಮೀಪ ಸೋಮವಾರ ರಾತ್ರಿ ಸಂಭವಿಸಿದ ಭಾರಿ ಹಿಮ ಕುಸಿತದಿಂದಾಗಿ ಐವರು ಸೈನಿಕರು ನಾಪತ್ತೆಯಾಗಿದ್ದಾರೆ.
ಗುರೆಝ್ ವಲಯದ ಬಕ್ತೂರ್ ಸಮೀಪದ ಸೇನಾ ಶಿಬಿರದ ಮೇಲೆ ಹಿಮ ಕುಸಿದ ಕಾರಣ ಮೂವರು ಸೈನಿಕರು ಹಾಗೂ ಕುಪ್ವಾರಾದ ನೊವ್ಗಾಮ್ದಲ್ಲಿ ದೊಗ್ರಾ ರೆಜಿಮೆಂಟ್ನ ಇಬ್ಬರು ಸೈನಿಕರು ನಾಪತ್ತೆಯಾಗಿದ್ದಾರೆ.
’ಸೈನಿಕರ ಪತ್ತೆಗೆ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ, ನಿರಂತರ ಹಿಮಪಾತವಾಗುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸುಮಾರು ಐದು ಅಡಿಗಳಷ್ಟು ಹಿಮ ಬಿದ್ದಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಸೇನೆಯ ಕೆಲಸಕ್ಕೆ ನಿಯೋಜಿಸಲಾಗಿದ್ದ ಒಬ್ಬ ಕೂಲಿಕಾರ್ಮಿಕ ಗುರೆಜ್ ವಲಯದಲ್ಲಿ ನಾಪತ್ತೆಯಾಗಿದ್ದಾರೆ.
ಬಂಡಿಪೊರ್ ಜಿಲ್ಲೆಯ ಗುರೆಝ್ ವಲಯ ಅತಿ ಎತ್ತರದ ಗುಡ್ಡ ಬೆಟ್ಟಗಳಿಂದ ಆವರಿಸಿಕೊಂಡಿದ್ದು, ಗಡಿ ನಿಯಂತ್ರಣ ರೇಖೆಯಲ್ಲಿದೆ. ಉಗ್ರರು ಈ ಪ್ರದೇಶದಲ್ಲೇ ಅತಿ ಹೆಚ್ಚಾಗಿ ನುಸುಳಿ ಕಾಶ್ಮೀರ ಪ್ರವೇಶಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಜನವರಿಯಲ್ಲಿ ಸಂಭವಿಸಿದ ಹಿಮ ಕುಸಿತದಲ್ಲಿ 24 ಮಂದಿ ಸಾವಿಗೀಡಾಗಿದ್ದರು. ಕಾಶ್ಮೀರದಲ್ಲಿ ಇನ್ನೂ ಎರಡು ದಿನಗಳ ಕಾಲ ತೀವ್ರ ಹಿಮಪಾತ ಸಂಭವಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ, ಮನೆಯ ಒಳಗೆ ಇರುವಂತೆ ಜನರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.