ನವದೆಹಲಿ: ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾದ ಅಮರನಾಥ ಗುಹಾ ದೇವಾಲಯದಲ್ಲಿ ಮಂತ್ರಘೋಷ, ಭಜನೆ ಮಾಡಲು ನಿರ್ಬಂಧ ವಿಧಿಸಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್ಜಿಟಿ) ಸ್ಪಷ್ಟಪಡಿಸಿದೆ.
ಗುಹಾ ದೇವಾಲಯದ ಇಡೀ ಪ್ರದೇಶವನ್ನು ‘ನಿಶ್ಯಬ್ದ ವಲಯ’ ಎಂದು ಘೋಷಿಸುವ ಉದ್ದೇಶ ಹೊಂದಿಲ್ಲ. ಅಲ್ಲದೇ ಅಂತಹ ಘೋಷಣೆಯನ್ನೂ ಮಾಡಿಲ್ಲ ಎಂದು ಎನ್ಜಿಟಿ ಸ್ಪಷ್ಟಪಡಿಸಿದೆ.
ಯಾವುದೇ ವ್ಯಕ್ತಿಗಳು ಅಥವಾ ಭಕ್ತರು, ಶಿವಲಿಂಗದ ಮುಂಭಾಗದಲ್ಲಿ ನಿಶ್ಯಬ್ದ ಕಾಪಾಡಬೇಕು ಎಂಬ ನಿರ್ಬಂಧವನ್ನು ಮಾತ್ರ ವಿಧಿಸಲಾಗಿದೆ. ಇದನ್ನು ಹೊರತುಪಡಿಸಿದರೆ ದೇವಾಲಯದ ಮೆಟ್ಟಿಲುಗಳೂ ಸೇರಿದಂತೆ ಯಾವುದೇ ಭಾಗಕ್ಕೆ ಸಂಬಂಧಿಸಿದಂತೆ ನಿರ್ಬಂಧ ವಿಧಿಸಿಲ್ಲ ಎಂದು ಅದು ಗುರುವಾರ ತಿಳಿಸಿದೆ.
ಪವಿತ್ರ ಗುಹಾ ದೇವಾಲಯದ ಬಳಿಯ 30 ಮೆಟ್ಟಿಲುಗಳ ಆಚೆಗೆ ಯಾರೂ ಏನನ್ನೂ ಕೊಂಡೊಯ್ಯಬಾರದು. ಅದು ಸದ್ಯ ಜಾರಿಯಲ್ಲಿರುವ ದೇವಾಲಯ ಮಂಡಳಿಯ ಈ ಹಿಂದಿನ ನಿಯಮವೇ ಆಗಿದೆ. ಮೆಟ್ಟಿಲುಗಳ ಕೆಳ ಭಾಗಕ್ಕೆ ಸಂಬಂಧಿಸಿದಂತೆ ಯಾವ ನಿರ್ಬಂಧವನ್ನೂ ವಿಧಿಸಿಲ್ಲ ಎಂದು ಅದು ತಿಳಿಸಿದೆ.