ವೃತ್ತಿಯಲ್ಲಿ ಪೋಟೊಗ್ರಾಫರ್ ಆಗಿರುವ ಬಡಕುಟುಂಬದ ಮುಷ್ತಾಕಸಾಬ್ ಹೈದರಸಾಬ್ ಕಿಲ್ಲೇದಾರ 2002ರಲ್ಲಿ ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿಯ ಆಯೇಷಾರನ್ನು ಕೈಹಿಡಿದು 16 ವರ್ಷಗಳು ತುಂಬಿದವು. ಈ ದಂಪತಿಗೆ ಹೆಣ್ಣು ಮತ್ತು ಗಂಡು ಮಗುವಿದೆ. ಕೇವಲ 1500 ಜನಸಂಖ್ಯೆ ಹೊಂದಿರುವ ಈ ಪುಟ್ಟ ಗ್ರಾಮದಲ್ಲಿ ಅಲ್ಪಸಂಖ್ಯಾತ (ಕಿಲ್ಲೇದಾರ) ಕೋಮಿನವರು ಹೆಚ್ಚಿದ್ದಾರೆ. ಮುಷ್ತಾಕಸಾಬ್ ಈ ಗ್ರಾಮದಲ್ಲಿ ಅಷ್ಟೇ ಅಲ್ಲದೇ, ಪಕ್ಕದ ದೇವನೂರ, ಕಮಡೊಳ್ಳಿ ಗ್ರಾಮಗಳಲ್ಲಿಯೂ ವೃತ್ತಿಗೆ ಹೋದಾಗ ಬಡವರಿಗೆ ಸಹಾಯ ಗುಣವನ್ನು ಹೊಂದಿದ್ದಾರೆ. ಪೋಟೊಗ್ರಾಫರ್ ವೃತ್ತಿ ಮಾಡುತ್ತಾ ಸಂಕಷ್ಟದಲ್ಲಿರುವ ಬಡವರಿಗೆ ಸಂಧ್ಯಾ ಸುರಕ್ಷೆ, ವಿಧವಾ ವೇತನ, ಅಂಗವಿಕಲರಿಗೆ ತಿಂಗಳ ಮಾಸಾಶನ ಸೇರಿದಂತೆ ವಿವಿಧ ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದಾರೆ.