ದಾವಣಗೆರೆ: ನಗರದ ರೈಲು ನಿಲ್ದಾಣದ ಮುಂಭಾಗದಲ್ಲಿದ್ದ ಭಗತ್ಸಿಂಗ್ ಪುತ್ಥಳಿಯನ್ನು ಪಾಲಿಕೆ ಏಕಾಏಕಿ ತೆರವುಗೊಳಿಸಿರುವುದನ್ನು ಖಂಡಿಸಿ ಎಐಡಿಎಸ್ಒ, ಎಐಡಿವೈಒ ಹಾಗೂ ಎಐಎಂಎಸ್ಎಸ್ ಸಂಘಟನೆಗಳು ಪಾಲಿಕೆ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದವು.
ದೇಶಭಕ್ತ ಭಗತ್ಸಿಂಗ್ ಪುತ್ಥಳಿ ನಗರದ ಹೃದಯಭಾಗದಲ್ಲಿತ್ತು. ಹೋರಾಟಗಾರರಿಗೆ, ವಿದ್ಯಾರ್ಥಿಗಳಿಗೆ ಇದು ಸ್ಫೂರ್ತಿದಾಯಕವಾಗಿತ್ತು. ಇಂತಹ ಪುತ್ಥಳಿಯನ್ನು ಯಾವುದೇ ಸುಳಿವು ನೀಡದೇ ಪಾಲಿಕೆ ತೆರವು ಗೊಳಿಸಿದ್ದು ಖಂಡನೀಯ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೊಮ್ಮೆ ಪುತ್ಥಳಿ ತೆರವು ಗೊಳಿಸಲು ಮುಂದಾದಾಗ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಈಗ ಯಾರ ಗಮನಕ್ಕೂ ತಾರದೆ ತೆರವುಗೊಳಿಸಿರುವುದರಿಂದ ಅಘಾತ ವಾಗಿದೆ. ಪುತ್ಥಳಿಯನ್ನು ಈಗಿರುವ ಸ್ಥಳದಲ್ಲೇ ಮರುಸ್ಥಾಪಿಸಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರಾದ ಮಂಜುನಾಥ ಕುಕ್ಕವಾಡ, ಮಂಜುನಾಥ ಕೈದಾಳೆ ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ‘ಪುತ್ಥಳಿ ತೆರವುಗೊಳಿಸುವ ಮೊದಲು ಸಂಘಟನೆಗಳ ಮುಖಂಡರೊಂದಿಗೆ ಪಾಲಿಕೆ ಮಾತುಕತೆ ನಡೆಸಬೇಕಿತ್ತು. ಪ್ರತಿಮೆ ಮರುಸ್ಥಾಪನೆ ಕುರಿತಂತೆ ಸಭೆ ಕರೆದು ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.
ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಕೂಡ ಇದ್ದರು. ಪ್ರತಿಭಟನೆಯಲ್ಲಿ ಸಂಘಟನೆಗಳ ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ಪರಶುರಾಮ್, ಮಧು, ಬನಶ್ರೀ, ಭಾರತಿ, ರಾಘು ದೊಡ್ಮನಿ, ನಾಗಜ್ಯೋತಿ ಅವರೂ ಇದ್ದರು.