ನವದೆಹಲಿ: ಪ್ರಯಾಣದ ಯೋಜನೆಗಳನ್ನು ಬೇಗನೆ ಪಕ್ಕಾ ಮಾಡಿಕೊಂಡರೆ ಕಡಿಮೆ ದರದಲ್ಲೇ ರೈಲಿನಲ್ಲಿ ಸಂಚಾರ ಮಾಡುವ ಸಾಧ್ಯತೆ ದೂರವಿಲ್ಲ.
ಬೇಗನೆ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅವಕಾಶ ನೀಡುವ ದರ ಪರಿಶೀಲನಾ ಸಮಿತಿಯ ಶಿಫಾರಸಿಗೆ ರೈಲ್ವೆ ಮಂಡಳಿಯ ಅನುಮತಿ ಸಿಗುವುದೊಂದೇ ಬಾಕಿ ಇದೆ. ಸದ್ಯ ಇಂಥ ಕೊಡುಗೆಗಳನ್ನು ವಿಮಾನಯಾನ ಸಂಸ್ಥೆಗಳು ನೀಡುತ್ತಿವೆ.
‘ಟಿಕೆಟ್ ಕಾಯ್ದಿರಿಸುವ ವೇಳೆ ಎಷ್ಟು ಆಸನಗಳು ಲಭ್ಯವಿವೆ ಎಂಬ ಆಧಾರದಲ್ಲಿ ಶೇ 20ರಿಂದ ಶೇ 50ರವರೆಗೆ ರಿಯಾಯಿತಿ ನೀಡಲು ಶಿಫಾರಸು ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಯಾಣಿಕರ ಪಟ್ಟಿ ಸಿದ್ಧಗೊಂಡ ನಂತರ ಟಿಕೆಟ್ ಕಾಯ್ದಿರಿಸುವವರಿಗೂ ರಿಯಾಯಿತಿ ನೀಡಬೇಕು. ರೈಲು ಹೊರಡಲು ಎರಡು ದಿನ ಬಾಕಿ ಇರುವಾಗಿನಿಂದ ಹಿಡಿದು ಎರಡು ಗಂಟೆ ಇರುವವರೆಗೂ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಬೇಕು ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.
ಕೆಳಗಿನ ಬರ್ತ್ ಆಯ್ಕೆ ಮಾಡಿಕೊಳ್ಳುವವರಿಗೆ ಹೆಚ್ಚಿನ ಶುಲ್ಕ ವಿಧಿಸಬೇಕು; ಹಿರಿಯ ನಾಗರಿಕರು, ಅಂಗವಿಕಲರು, ಗರ್ಭಿಣಿಯರಿಗೆ ಉಚಿತ ಪ್ರಯಾಣ ಅವಕಾಶ ನೀಡಬೇಕು ಎಂಬುದೂ ಶಿಫಾರಸಿನ ಅಂಶಗಳಾಗಿವೆ.
ಸ್ಥಳೀಯವಾಗಿ ಇರುವ ಬೇಡಿಕೆ ಮತ್ತು ಪೂರೈಕೆಗಳಿಗೆ ಅನುಗುಣವಾಗಿ ಆಯಾ ರೈಲ್ವೆ ವಲಯಗಳೇ ದರ ನಿಗದಿ ಮಾಡಲು ಬಿಡಬೇಕು ಎಂದೂ ಹೇಳಲಾಗಿದೆ.