ಬೆಂಗಳೂರು: ಹೆಸರಘಟ್ಟ ಸಮೀಪದ ಚಿಕ್ಕಬಾಣಾವರದಿಂದ ಗಾಣಿಗರಹಳ್ಳಿಯವರೆಗಿನ ರಸ್ತೆಯನ್ನು ₹6 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮಾಡುವ ಕಾಮಗಾರಿಗೆ ಶಾಸಕ ಮುನಿರಾಜು ಹಾಗೂ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಚಾಲನೆ ನೀಡಿದರು.
ಈ ರಸ್ತೆಯು 7 ಕಿ.ಮೀ. ಇದ್ದು, ಎರಡು ವರ್ಷಗಳಿಂದ ಹಾಳಾಗಿತ್ತು. ಇದರಿಂದ ಈ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದರು. ಚಿಕ್ಕಬಾಣಾವರ ಕೆರೆ ಭಾಗದಲ್ಲಿರುವ ರಸ್ತೆಯಲ್ಲಿ ಡಾಂಬರು ಪದರ ಬೇಗ ಹಾಳಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಡಾಂಬರೀಕರಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಕೋಳಿ ಅಂಗಡಿಗಳ ಮಾಲೀಕರು ಕೋಳಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಸುರಿದಿದ್ದಾರೆ. ಇದರಿಂದ ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ. ಕೋಳಿ ತ್ಯಾಜ್ಯ ಸುರಿಯುವುದಕ್ಕೆ ಕಡಿವಾಣ ಹಾಕಬೇಕು ಎಂದು ನಿವಾಸಿ ಮಹೇಶ್ ಒತ್ತಾಯಿಸಿದರು.